ವಿಚಾರವಾದಿಗಳ ಬಂಧನ: ಮಹಾರಾಷ್ಟ್ರ ಪೊಲೀಸರಿಂದ ಪತ್ರಿಕಾಗೋಷ್ಠಿ
ಮುಂಬೈ, ಆಗಸ್ಟ್ 31: ಭೀಮಾ ಕೊರೆಗಾಂವ್ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರವಾದಿಗಳ ಬಂಧನದ ಕುರಿತಂತೆ ಇಂದು ಮಹಾರಾಷ್ಟ್ರ ಪೊಲೀಸರು ಪತ್ರಿಕಾಗೊಷ್ಠಿ ನಡೆಸಿದ್ದಾರೆ.
'ನಾವು ಅವರನ್ನು ಬಂಧಿಸಿದ್ದು ವಿಚಾರಣೆಗಾಗಿ ಮಾತ್ರ. ಅವರಿಗೆ ಮಾವೋವಾದಿಗಳೊಂದಿಗೆ ನಂಟಿರುವುದು ಅಥವಾ ಭೀಮಾ ಕೊರೆಗಾಂವ್ ಗಲಭೆಯಲ್ಲಿ ಅವರ ಪಾತ್ರವಿರುವುದರ ಕುರಿತು ಇದುವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಅದು ಸಾಬೀತಾದ ಮೇಲೆಯೇ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪರಮ್ ಬೀರ್ ಸಿಂಗ್ ಹೇಳಿದರು.
31-12-2017 ರಂದು ನಡೆದ ಭೀಮಾ ಕೊರೆಗಾಂವ್ 200 ನೇ ವರ್ಷಾಚರಣೆ ವೇಳೆಯ ಗಲಭೆಗೆ ಸಂಬಂಧಿಸಿದಂತೆ ಜನವರಿ 8 ರಂದು ದೂರು ದಾಖಲಾಗಿತ್ತು. ಕೆಲವರು ಪ್ರಚೋದನಾತ್ಮಕ ಭಾಷಣ ಮಾಡಿದ ಕುರಿತೂ ದೂರು ಬಂದಿತ್ತು. ಈ ಕುರಿತು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದೆವು ಅಷ್ಟೆ.

ತನಿಖೆಯ ವೇಳೆ ನಮಗೆ ಹಲವು ಸ್ಫೋಟಕ ಮಾಹಿತಿಗಳ ಸಿಕ್ಕಿದ್ದವು. ಆರೋಪಿಗಳು ತಮ್ಮ ಗುರಿ ಸಾಧಿಸಿಕೊಳ್ಳಲು ಮಾವೋವಾದಿಗಳ ನೆರವು ಪಡೆಯಲು ಬಯಸುತ್ತಿದ್ದರು ಎಂಬುದು ಈ ಮೂಲಕ ಗೊತ್ತಾಗಿತ್ತು. ಆದ್ದರಿಂದ ಮೇ 17 ರಂದು ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ಪರಮ್ ಬೀರ್ ಸಿಂಗ್ ಹೇಳಿದರು.
ಮಹಾರಾಷ್ಟ್ರದಲ್ಲಿ ಕಳೆದ ಡಿಸೆಂಬರ್-ಜನವರಿಯಲ್ಲಿ ನಡೆದ ಭೀಮಾ ಕೊರೆಗಾಂವ್ ವರ್ಷಾಚರಣೆಯ ಸಂದರ್ಭದ ಹಿಂಸಾಚಾರದಲ್ಲಿ ಕೆಲವು ವಿಚಾರವಾದಿಗಳ ಕೈವಾಡವಿದೆ ಎಂದು ಅವರನ್ನು ಮಂಗಳವಾರ ಬಂಧಿಸಲಾಗಿತ್ತು.
ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಲಾಗಿತ್ತು.












Click it and Unblock the Notifications