Breaking: ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಸಲ್ಮಾನ್, ಏಕೆ?
ಮುಂಬೈ, ಜುಲೈ 22: ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಇಂದು(ಜುಲೈ 22) ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿಯಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭೇಟಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಕ್ರಾಫರ್ಡ್ ಮಾರುಕಟ್ಟೆ ಎದುರಿಗೆ ಮುಂಬೈ ಪೊಲೀಸ್ ಪ್ರಧಾನ ಕಚೇರಿಗೆ ಸಂಜೆ 4 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಆಗಮಿಸಿದ ನಟ ಫನ್ಸಾಲ್ಕರ್ ಅವರನ್ನು ಭೇಟಿಯಾದರು. ''ಇದು ಕೇವಲ ಸೌಜನ್ಯದ ಭೇಟಿಯಾಗಿದೆ ಮತ್ತು ಯಾವುದೇ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿಶ್ವಾಸ್ ನಂಗ್ರೆ ಪಾಟೀಲ್ ಅವರನ್ನು ಕೂಡಾ ಸಲ್ಮಾನ್ ಭೇಟಿಯಾಗಿದ್ದಾರೆ.
ಸಲ್ಮಾನ್ ಖಾನ್ ನಂತರ ಸ್ವರಾ ಭಾಸ್ಕರ್ಗೆ ಜೀವ ಬೆದರಿಕೆ
ನಟ ಸಲ್ಮಾನ್ ಖಾನ್ ಮತ್ತು ಚಿತ್ರ ಸಾಹಿತಿ, ಸಲ್ಮಾನ್ ತಂದೆ ಸಲೀಂ ಖಾನ್ ಅವರ ಹತ್ಯೆ ಬಗ್ಗೆ ಬೆದರಿಕೆ ಪತ್ರ ಬಂದಿತ್ತು. ಮೇ ತಿಂಗಳಲ್ಲಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ರೀತಿಯಲ್ಲೇ ತಂದೆ-ಮಗ ಇಬ್ಬರನ್ನು ಮುಗಿಸಲಾಗುತ್ತದೆ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿತ್ತು. ನಂತರ ಖಾನ್ ಮನೆಯ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಗಾಯಕ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಬಿರುಗಾಳಿ ಎದ್ದಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು 2021 ರಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದಾಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದರು. ಲಾರೆನ್ಸ್ ಬಿಷ್ಣೋಯ್ ಅವರ ವಿಚಾರಣೆಯ ವರದಿಯ ಪ್ರತಿಯಲ್ಲಿ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ರಾಜಸ್ಥಾನ ಮೂಲದ ಗ್ಯಾಂಗ್ಸ್ಟರ್ ಸಂಪತ್ ನೆಹ್ರಾ ಅವರನ್ನು ಕೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ
ದೂರದಿಂದ ಸಲ್ಮಾನ್ ಖಾನ್ ಮೇಲೆ ಸ್ಪಷ್ಟವಾದ ಗುರಿಯನ್ನು ಇಡಲು ಅವರಿಗೆ ಸಾಧ್ಯವಾಗಲಿಲ್ಲ. ದರೋಡೆಕೋರರು ನಂತರ ನೆಹ್ರಾ ಅವರ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ ದಿನೇಶ್ ಫೌಜಿ ಎಂದು ಗುರುತಿಸಲಾದ ವ್ಯಕ್ತಿಯ ಮೂಲಕ ಆರ್ಕೆ ಸ್ಪ್ರಿಂಗ್ ರೈಫಲ್ ಅನ್ನು ಆರ್ಡರ್ ಮಾಡಿದರು. ದಿನೇಶ್ ಫೌಜಿ ಬಳಿ ಇದ್ದ ಆರ್ಕೆ ಸ್ಪ್ರಿಂಗ್ ರೈಫಲ್ಗಾಗಿ ಲಾರೆನ್ಸ್ ಬಿಷ್ಣೋಯ್ ತನ್ನ ಸಹವರ್ತಿ ಅನಿಲ್ ಪಾಂಡ್ಯಗೆ 3-4 ಲಕ್ಷ ರೂಪಾಯಿ ನೀಡಿದ್ದರು. ಪೊಲೀಸರು ರೈಫಲ್ ಹೊಂದಿದ್ದ ಫೌಜಿಯನ್ನು ಪತ್ತೆಹಚ್ಚಿದರು ಮತ್ತು ಅವರನ್ನು ಬಂಧಿಸಿದ್ದಾರೆ.
'ನಾನು ಯಾರನ್ನೂ ಅನುಮಾನಿಸುವುದಿಲ್ಲ' ಸಲ್ಮಾನ್ ಖಾನ್ ಹೇಳಿಕೆ
ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ವಿಶೇಷ ಸೆಲ್, ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರೋಪಿ ಬಿಷ್ಣೋಯ್ ಯನ್ನು ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ಗೆ ಜೀವ ಬೆದರಿಕೆಯ ಕುರಿತು ವಿಚಾರಣೆ ನಡೆಸಲಾಗಿದೆ.
ಪೊಲೀಸರಿಗೆ ನೀಡಿರುವ ಹೇಳಿಕೆ:
ಸಲ್ಮಾನ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ: ಬೆದರಿಕೆ ಪತ್ರದ ಬಗ್ಗೆ ನಾನು ಯಾರನ್ನೂ ಅನುಮಾನಿಸುವುದಿಲ್ಲ. ನನಗೆ ಯಾರೊಂದಿಗೂ ದ್ವೇಷವಿಲ್ಲ. ಲಾರೆನ್ಸ್ ಬಿಷ್ಣೋಯ್ ಅವರು ನನಗೆ ಮೊದಲ ಬಾರಿಗೆ ಬೆದರಿಕೆ ಹಾಕಿದ್ದನು ಎಂದು 2018 ರ ವರ್ಷದಲ್ಲಿ ಪೊಲೀಸ್ ವಿಚಾರಣೆಯಿಂದ ನನಗೆ ತಿಳಿದಿದೆ. ಗೋಲ್ಡಿ ಬಾರ್ ಯಾರೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ ವಾಯುವಿಹಾರದಲ್ಲಿ ಈ ಪತ್ರ ಪತ್ತೆಯಾಗಿತ್ತು. ಬೆಳಗಿನ ವಾಕ್ ಮುಗಿಸಿ ಸಲೀಂ ಕುಳಿತುಕೊಳ್ಳುವ ಜಾಗದಲ್ಲಿ ಸಲೀಂ ಖಾನ್ ಅವರ ಸಿಬ್ಬಂದಿಗೆ ಪತ್ರ ಸಿಕ್ಕಿದೆ. ಈ ಬೆದರಿಕೆ ಪತ್ರದಲ್ಲಿ - ಶೀಘ್ರದಲ್ಲೇ ಸಲ್ಮಾನ್ ಖಾನ್ ಹಾಗೂ ನಿಮ್ಮ ಸ್ಥಿತಿ ಸಿಧು ಮೂಸೆವಾಲಾ ಅವರಂತಾಗುತ್ತದೆ ಎಂದು ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಬಾಂದ್ರಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಿಧು ಮುಸೇವಾಲಾ ಹತ್ಯೆಯ ನಂತರ ಸಲ್ಮಾನ್ಗೆ ಬೆದರಿಕೆ ಪತ್ರ ಬಂದಿದ್ದು ಇಡೀ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಲ್ಮಾನ್, ಪತ್ರ ನನಗೆ ಬಂದಿಲ್ಲ, ತಂದೆಗೆ ಸಿಕ್ಕಿದ್ದು, ನಾನು ಯಾರೊಂದಿಗೂ ಇತ್ತೀಚೆಗೆ ಜಗಳವಾಡಿಲ್ಲ, ಯಾರೊಂದಿಗೂ ಮನಸ್ತಾಪವಾಗಿಲ್ಲ, ಹೀಗಾಗಿ ನಾನು ಯಾರನ್ನು ಅನುಮಾನಿಸುತ್ತಿಲ್ಲ ಎಂದಿದ್ದಾರೆ.