ದಕ್ಷಿಣ ಮುಂಬೈನ ಶೇ.80ರಷ್ಟು ಭಾಗ 2050ರಷ್ಟೊತ್ತಿಗೆ ಮುಳುಗಡೆ: ಬಿಎಂಸಿ
ಮುಂಬೈ, ಆಗಸ್ಟ್ 28: ದಕ್ಷಿಣ ಮುಂಬೈನ ಶೇ.80ರಷ್ಟು ಭಾಗ, 2050ರಷ್ಟೊತ್ತಿಗೆ ಮುಳುಗಡೆಯಾಗಲಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.
ಮುಂಬೈ ಹವಾಮಾನ ಕ್ರಿಯಾ ಯೋಜನೆ ಮತ್ತು ಅದರ ಜಾಲತಾಣವನ್ನು ಮಹಾರಾಷ್ಟ್ರ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಬಿಡುಗಡೆ ಮಾಡಿದರು.
ದಕ್ಷಿಣ ಮುಂಬೈನ ಪ್ರಮುಖ ವ್ಯಾಪಾರ ಜಿಲ್ಲೆಯಾಗಿರುವ ನಾರಿಮನ್ ಪಾಯಿಂಟ್ ಮತ್ತು ರಾಜ್ಯ ಸಚಿವಾಲಯಗಳ ಕಚೇರಿಗಳು, ಎ,ಬಿ,ಸಿ ಮತ್ತು ಡಿ ವಾರ್ಡ್ಗಳು ಸೇರಿದಂತೆ ಪ್ರಮುಖ ಭಾಗಗಳು ನೀಡಿನಲ್ಲಿ ಮುಳುಗಡೆಯಾಗಲಿವೆ ಎಂದು ಸಿಂಗ್ ಹೇಳಿದ್ದಾರೆ.

2050ನೇ ಇಸವಿ ಬಹಳ ದೂರವಿಲ್ಲ, ಈಗ ನಾವು ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳುತ್ತಿದ್ದರೆ, ಖಂಡಿತವಾಗಿಯೂ 25-30 ವರ್ಷಗಳಲ್ಲಿ ಅಪಾಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಈ ಅಪಾಯವನ್ನು ಮುಂದಿನ ಪೀಳಿಗೆಯಷ್ಟೇ ಅಲ್ಲ, ನಾವು ಕೂಡ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಕುರಿತು ಕ್ರಿಯಾ ಯೋಜನೆ ರೂಪಿಸಿರುವ ಮೊದಲ ನಗರ ಮುಂಬೈ ಎಂದು ಹೇಳಿದರು.
ಪ್ರಕೃತಿ ಈಗಾಗಲೇ ಎಚ್ಚರಿಕೆ ನೀಡುತ್ತಿದ್ದರೂ, ಯಾರೂ ಎಚ್ಚೆತ್ತುಕೊಳ್ಳುತ್ತಿಲ್ಲ, ಇಂತಹ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಮುಂಬೈನ ಪ್ರಮುಖ ಪ್ರದೇಶಗಳು ಮುಳುಗಿ ಹೋಗುತ್ತವೆ. ಇದರರ್ಥ ಕಣ್ಮರೆಯಾಗಲಿದೆ.
ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಸಾಗರದ ನೀರಿನ ಮಟ್ಟ ಏರಿಕೆಯಾಗಿ ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಅನೇಕ ಕರಾವಳಿ ನಗರಗಳು ಸಂಪೂರ್ಣ ಮುಳುಗಡೆಯಾಗಿ ಕೋಟ್ಯಾಂತರ ರ ಜನರು ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ.
ಗಂಭೀರದ ವಿಚಾರವೆಂದರೆ ಸಾಗರಗಳು ತನ್ನ ದಡದ ಪ್ರದೇಶಗಳನ್ನ ನುಂಗಿಹಾಕುವ ಪ್ರಕ್ರಿಯೆ ನಿರೀಕ್ಷೆಗೂ ಮೀರಿ ಅತಿ ವೇಗದಲ್ಲಿ ನಡೆಯುತ್ತಿದೆ. ಸಾಗರದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನಿರೀಕ್ಷೆ ಮೀರಿದ ವೇಗದಲ್ಲಿ ಭೂಪ್ರದೇಶಗಳು ನೀರಿನಿಂದ ಅವೃತವಾಗಲಿವೆ ಎಂದೂ ಸಂಶೋಧನೆಯೊಂದು ತಿಳಿಸಿದೆ.
ಇನ್ನು 30 ವರ್ಷದಲ್ಲಿ, ಅಂದರೆ 2050 ರವೇಳೆಗೆ ಭಾರತದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಹಲವು ನಗರಗಳು ನೀರಿನಲ್ಲಿ ಮುಳುಗಡೆಯಾಗಿ ವಿಶ್ವದ ಭೂಪಟದಿಂದ ಕಣ್ಮರೆಯಾಗಲಿವೆ.
ಇನ್ನೂ ಆತಂಕದ ವಿಚಾರವೆಂದರೆ 15 ಕೋಟಿಗೂ ಹೆಚ್ಚು ಜನರು ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿ, ಬೇರೆ ಕಡೆ ವಲಸೆ ಹೋಗುವುದರಿಂದ ವಿವಿಧ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳು ತಲೆದೋರಬಹುದು. ವಿವಿಧ ದೇಶಗಳಲ್ಲಿ ಕಲಹ, ಭಯೋತ್ಪಾದನೆಗಳು ಹೆಚ್ಚಾಗಬಹುದು ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ನ್ಯೂ ಜೆರ್ಸಿ ನಗರದ 'ಕ್ಲೈಮೇಟ್ ಸೆಂಟ್ರಲ್' ಎಂಬ ವಿಜ್ಞಾನ ಸಂಸ್ಥೆ ನಡೆಸಿದ ಹೊಸ ಸಂಶೋಧನೆಯಿಂದ ಈ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ ಎಂದೂ ಹೇಳಲಾಗಿದೆ.
ಭಾರತದ ವಾಣಿಜ್ಯ ರಾಜಧಾನಿ ಎನ್ನಲಾದ ಹಾಗೂ ವಿಶ್ವದ ಬೃಹತ್ ನಗರಗಳಲ್ಲೊಂದೆನಿಸಿದ ಮುಂಬೈನ ಬಹುತೇಕ ಭೂಪ್ರದೇಶವು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಈ ಸಂಶೋಧಕರು ಎಚ್ಚರಿಸಿದ್ದಾರೆ.
"ಕ್ಲೈಮೇಟ್ ಸೆಂಟ್ರಲ್" ತನ್ನ ವರದಿಯನ್ನು "ನೇಚರ್ ಕಮ್ಯೂನಿಕೇಶನ್ಸ್" ಪತ್ರಿಕೆಯಲ್ಲಿ ಬಿಡುಗಡೆ ಮಾಡಿದ್ದು, ಸಂಶೋಧಕರು ಈ ಹಿಂದಿನ ವಿಧಾನದ ಬದಲು ಉಪಗ್ರಹ ಮಾಹಿತಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವಿನಿಂದ ಸಮುದ್ರ ನೀರಿನ ಮಟ್ಟವನ್ನು ಅಳೆದು ಭೂಮುಳುಗಡೆಯ ಪ್ರಮಾಣವನ್ನು ಹೆಚ್ಚು ಕರಾರುವಾಕ್ಕಾಗಿ ಅಂದಾಜು ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications