ಮುಂಬೈ ಕಟ್ಟಡ ದುರಂತ : ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆ
ಮುಂಬೈ, ಸೆಪ್ಟೆಂಬರ್ 1: ದೇಶದ ವಾಣಿಜ್ಯನಗರಿ ಮುಂಬೈಯಲ್ಲಿ ಆಗಸ್ಟ್ 31 ರಂದು ಮೂರಂತಸ್ತಿನ ಕಟ್ಟಡವೊಂದು ನೆಲಕ್ಕುರುಳಿದ ಪರಿಣಾಮ 32 ಮಂದಿ ಸಾವಿಗೀಡಾಗಿದ್ದು, 47 ಜನರನ್ನು ರಕ್ಷಿಸಲಾಗಿದೆ.
ಮುಂಬೈ ಪಾಲಿಗೆ ಕರಾಳ ದಿನ: ಕಟ್ಟಡ ಕುಸಿತದ ದುರಂತಕ್ಕೆ 19 ಸಾವು
ಮುಂಬೈಯ ಭೆಂಡಿ ಬಜಾರ್ ಪಾಲಿಗೆ ಆಗಸ್ಟ್ 31 ಕರಾಳ ದಿನ. ಕಳೆದ ಮೂರ್ನಾಲ್ಕು ದಿನದಿಂದ ಮುಂಬೈಯಲ್ಲಿ ನಿರಂತರವಾಗಿ ಸುರಿದ ಮಳೆಗೆ ಇಲ್ಲಿನ ಪಾಕ್ಮೋಡಿಯ ರಸ್ತೆಯ ಜೆಜೆ ಜಂಕ್ಷನ್ ಬಳಿಯ ಬಿಂಡಿ ಬಜಾರ್ ನಲ್ಲಿ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದಿತ್ತು. ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆ ನಡೆಸಿ 47 ಜನರನ್ನು ರಕ್ಷಿಸಿದ್ದು, 32 ಜನರು ದುರಂತ ಅಂತ್ಯ ಕಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಈ ಘಟನೆ ಯಾರದೇ ಬೇಜವಾಬ್ದಾರಿಯಿಂದ ಸಂಭವಿಸಿದ್ದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ಅವರೇ ಖುದ್ದು ಕಾಳಜಿ ವಹಿಸಿ, ಮಾಹಿತಿ ಕಲೆಹಾಕುತ್ತಿದ್ದಾರೆ.
Recommended Video
ಜುಲೈ 25 ರಂದು ಸಹ ಮುಂಬೈಯ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ನಾಲ್ಕು ಅಂತಸ್ತಿನ ಎರಡು ಕಟ್ಟಡ ಕುಸಿದು 14 ಮಂದಿ ಸಾವನ್ನಪ್ಪಿದ್ದರು.
ವಾಣಿಜ್ಯ ರಾಜಧಾನಿಯಲ್ಲಿ ಕಟ್ಟಡ ಕುಸಿತದ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟುಮಾಡಿದೆ. ಅಪಾರ್ಟ್ ಮೆಂಟ್ ಗಳ ಸುರಕ್ಷತೆಯ ಬಗ್ಗೆಯೇ ಜನರಲ್ಲಿ ಅನುಮಾನ ಏಳುವಂತಾಗಿದೆ. ಇತ್ತೀಚೆಗೆ ನಡೆದ ಮಳೆಗಾಲದ ಸರ್ವೆಯೊಂದು ಮುಂಬೈಯಲ್ಲಿರುವ ಸುಮಾರು 791 ಕಟ್ಟಡಗಳನ್ನು ಅಪಾಯಕಾರಿ ಕಟ್ಟಡಗಳು ಎಂದು ಗುರುತಿಸಿ, ಇವು ಜೋರು ಮಳೆ-ಗಾಳಿಯನ್ನು ಎದುರಿಸಲಾರದಷ್ಟು ದುರ್ಬಲವಾಗಿವೆ ಎಂದು ಹೇಳಿದೆ.
ಒಟ್ಟಿನಲ್ಲಿ ಮಾಯಾನಗರಿಯ ಅಸಲಿ ಬಂಡವಾಳ ಜೋರು ಮಳೆಗೆ ಬಯಲಾಗುತ್ತಿದೆ!