ಬರದ ನಾಡಲ್ಲಿ 'ಭರ್ಜರಿ' ಮದುವೆ ಮಾಡಿದ ಬಿಜೆಪಿ 'ಮಹಾ' ಅಧ್ಯಕ್ಷ
ಮಹಾರಾಷ್ಟ್ರ ರಾಜ್ಯ ಬರದಲ್ಲಿ ಕಂಗೆಟ್ಟು ಹೋಗಿರುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರ ಪುತ್ರ ಶಾಸಕ ಸಂತೋಷ್ ಅವರ ಮದುವೆ ಅತ್ಯಂತ ವೈಭವೋಪೇತವಾಗಿ ನಡೆಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈ, ಮಾರ್ಚ್ 06: ಮಹಾರಾಷ್ಟ್ರ ರಾಜ್ಯ ಬರದಲ್ಲಿ ಕಂಗೆಟ್ಟು ಹೋಗಿರುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರ ಪುತ್ರ ಶಾಸಕ ಸಂತೋಷ್ ಅವರ ಮದುವೆ ಅತ್ಯಂತ ವೈಭವೋಪೇತವಾಗಿ ನಡೆಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬರಪೀಡಿತ ಮರಾಠವಾಡ ಪ್ರಾಂತ್ಯದ ಭೋಕರ್ದಾನ್ ಕ್ಷೇತ್ರದ ಶಾಸಕ ಸಂತೋಷ್ ರಾವ್ ಸಾಹೇಬ್ ಪಾಟೀಲ್ ದನ್ವೆ ಅವರ ಮದುವೆ ಈಗ ವಿವಾದಕ್ಕೆ ಎಡೆ ಮಾಡಿದೆ. ಈ ವಿವಾಹ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹಾಗೂ ಪೂನಮ್ ಮಹಾಜನ್ ಸೇರಿದಂತೆ ಸರಿ ಸುಮಾರು 30, 000 ಗಣ್ಯರು ಆಗಮಿಸಿದ್ದರು.
ಔರಂಗಾಬಾದ್ ನಗರದ ಜಬಿಂದಾ ಎಸ್ಟೇಟಿನಲ್ಲಿ ಮಧ್ಯಪ್ರಾಚೀನ ಯುಗದ ಅರಮನೆಯ ಸೆಟ್ ನಲ್ಲಿ ಮದುವೆ ಜರುಗಿತು. ಆದರೆ, ಬಿಜೆಪಿ ಅಧ್ಯಕ್ಷರ ಮನೆ ಮದುವೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಮಾರ್ಚ್ 9ರಿಂದ ಆರಂಭವಾಗಲಿರುವ ಅಸೆಂಬ್ಲಿ ಕಲಾಪದಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಘೋಷಿಸಿದೆ. ಕಿರಿಯ ಶಾಸಕ ಸಂತೋಷ್ ಹಾಗೂ ಸಂಗೀತಗಾರ ರಾಜೇಶ್ ಅವರ ಪುತ್ರಿ ರೇಣು ಮದುವೆಯಿಂದ ಬಿಜೆಪಿ ಮುಜುಗರಕ್ಕೀಡಾಗುವ ಸಂದರ್ಭ ಬಂದೊದಗಿದೆ.
30 ಸಾವಿರ ಗೆಸ್ಟ್ ಗಳು
ಮಹಾರಾಷ್ಟ್ರದ ಗಣ್ಯಾತಿಗಣ್ಯರು, ರಾಜಕೀಯ ಮುಖಂಡರು ಈ ಮದುವೆಯಲ್ಲಿ ಕಂಡು ಬಂದರು. ಔರಂಗಾಬಾದಿನ ಜಬಿಂದಾ ಎಸ್ಟೇಟ್ ನಲ್ಲಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಅವರ ಸಚಿವ ಸಂಪುಟದ ಸದಸ್ಯರು, ವಿಪಕ್ಷ ನಾಯಕ ಧನಂಜಯ್ ಮುಂಡೆ ಮುಂತಾದವರಿದ್ದರು. ಬರದ ನಾಡಿನಿಂದ ಆಯ್ಕೆಯಾಗಿರುವ ಶಾಸಕ ಸಂತೋಷ್ ದಾನ್ವೆಯ ಐಷಾರಾಮಿ ಮದುವೆಗೆ ಎಲ್ಲರೂ ಸಾಕ್ಷಿಯಾದರು.
ಐಷಾರಾಮಿ ಮದ್ವೆ ಪಟ್ಟಿ
ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಮದ್ವೆಯನ್ನು ಈ ಮದುವೆ ನೆನಪು ಮಾಡಿತು. ಅಪನಗದೀಕರಣ ಜಾರಿಗೆ ಬಂದ ಬಳಿಕ ನಡೆದ ಮದುವೆಗೆ ಸುಮಾರು 500 ಕೋಟಿ ರು ಖರ್ಚಾಗಿದೆ ಎಂಬ ಅಂದಾಜಿದೆ. ಈಗ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರ ಮಗ ಶಾಸಕ ಸಂತೋಷ್ ಅವರ ಮದುವೆ ವಿವಾದಕ್ಕೆ ಕಾರಣವಾಗಿದೆ. ಖರ್ಚು ವೆಚ್ಚ ಗುಟ್ಟು ಇನ್ನೂ ರಟ್ಟಾಗಿಲ್ಲ.
ವೈರಾಲಾಗಿದ ವಿಡಿಯೋ
ಶಾಸಕ ಸಂತೋಷ್ ಅವರು ತಮ್ಮ ವಿವಾಹಕ್ಕೂ ಮುಂಚೆ ಭಾವಿ ಪತ್ನಿ ರೇಣು ಸರ್ಕತೆ ಅವರೊಂದಿಗೆ ಕಾಣಿಸಿಕೊಂಡಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಜಾನ್ ನ್ಯೂಮನ್ ಅವರ ಲವ್ ಮೀ ಅಗೈನ್ ಹಾಡಿಗೆ ಇಬ್ಬರು ಕುಣಿಯುವ ವಿಡಿಯೋ ಸಕತ್ ವೈರಲ್ ಆಗಿತ್ತು. ಈ ವಿಡಿಯೋಗೆ ಎಷ್ಟು ಖರ್ಚಾಗಿದೆ ಎಂದು ಬರ ಪೀಡಿತ ಕ್ಷೇತ್ರದ ಜನತೆ ಪ್ರಶ್ನಿಸಿದ್ದರು.
ದುಂದು ವೆಚ್ಚ ಮದುವೆಗೆ ಆಕ್ಷೇಪ
ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಸಂಸತ್ತಿನಲ್ಲಿ ಕಳೆದ ತಿಂಗಳು ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಖಾಸಗಿ ಮಸೂದೆ ಮಂಡಿಸಿರುವುದು ನೆನಪಿರಬಹುದು. ಇದರ ಆಧಾರ ಮೇಲೆ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ದನಿ ಎತ್ತಲು ನಿರ್ಧರಿಸಿದೆ.ಇದಲ್ಲದೆ, ಫೇಸ್ ಬುಕ್ ವಿಡಿಯೋ ಹೊರ ಬರುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ಆಕ್ಷೇಪ ವ್ಯಕ್ತಪಡಿಸಿ, ಬರ ಇರುವ ಸಂದರ್ಭದಲ್ಲಿ ಇಂಥದ್ದೆಲ್ಲ ಬೇಕಾ? ಎಂದು ಪ್ರಶ್ನಿಸಿದ್ದರು. ಚಿತ್ರಗಳ ಕೃಪೆ: ಟ್ವಿಟ್ಟರ್/ ಸ್ಕ್ರೀನ್ ಗ್ರಾಬ್