ನೈತಿಕ ಪೊಲೀಸ್ ಗಿರಿ ವಿರುದ್ಧ ಮಂಗಳೂರಲ್ಲಿ ಜಾಥಾ
ಮಂಗಳೂರು, ಸೆಪ್ಟೆಂಬರ್ 30 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಬೃಹತ್ ಪಾದಯಾತ್ರೆ ಆಯೋಜಿಸಲಾಗಿತ್ತು.
ನಗರದ ಲಾಲ್ ಬಾಗ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪಾದಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನೀಡಿದರು. 'ಕೋಮುವಾದವನ್ನು ಬುಡಸಹಿತ ಕಿತ್ತು ಹಾಕಲು ಸಂಕಲ್ಪ ಮಾಡುವಂತೆ ಯುವಕರಿಗೆ' ಸಚಿವರು ಕರೆ ನೀಡಿದರು. [ಮಂಗಳೂರಿನಲ್ಲಿ ಫೇಸ್ ಬುಕ್ ಉಗ್ರರು!]

'ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಮುವಾದಿಗಳು ನಡೆಸುತ್ತಿರುವ ಇಂಥಹ ಚಟುವಟಿಕೆಗಳ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ' ಎಂದು ಹೇಳಿದರು.

ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಮಾಜಿ ಮೇಯರ್ ಸಹಿತ ಯುವ ಕಾಂಗ್ರೆಸ್, ಎನ್ಎಸ್ಯುಐ ಸಹಿತ ಕಾಂಗ್ರೆಸ್ ಪದಾಧಿಕಾರಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ನಾಯಿ, ಬೆಕ್ಕು ಪ್ರದರ್ಶನ : ಪಿಲಿಕುಳ ನಿಸರ್ಗಧಾಮದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಅ. 4ರಂದು ನಾಯಿ ಹಾಗೂ ಬೆಕ್ಕುಗಳ ಪ್ರದರ್ಶನ ಆಯೋಜಿಸಲಾಗಿದೆ. ಶ್ವಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ 10,000 ರೂ., ದ್ವಿತೀಯ 7,500 ರೂ., ತೃತೀಯ ಬಹುಮಾನ 5,000 ರೂ., ಬೆಕ್ಕು ಪ್ರದರ್ಶನದಲ್ಲಿ ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 3,000 ರೂ. ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.












Click it and Unblock the Notifications