ಮಂಗಳೂರಿನಲ್ಲಿ ಸದಾನಂದ ಗೌಡರಿಗೆ ಅದ್ದೂರಿ ಸ್ವಾಗತ
ಮಂಗಳೂರು, ಮೇ 31 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲಬಾರಿ ದಕ್ಷಿಣ ಕನ್ನಡಕ್ಕೆ ಶನಿವಾರ ಬೆಳಗ್ಗೆ ಆಗಮಿಸಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡರಿಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಡಿವಿ ಸದಾನಂದ ಗೌಡ, ಅಗತ್ಯ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಂಡು ದಿನದ 24 ಗಂಟೆ ಕಾಲ ವಾರಪೂರ್ತಿ ಜವಾಬ್ದಾರಿಯಿಂದ ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಕರಾವಳಿ ಭಾಗದ ಜನರಿಗೆ ಭರವಸೆ ನೀಡಿದರು. [ಜುಲೈನಲ್ಲಿ ರೈಲ್ವೆ ಬಜೆಟ್ : ಡಿವಿಎಸ್]
ಮಂಗಳೂರಿನಲ್ಲಿ ಪತ್ಯೇಕ ರೈಲ್ವೆ ವಲಯ ಸ್ಥಾಪಿಸಬೇಕೆನ್ನುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಪ್ರಮುಖವಾಗಿ ರೈಲು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಸದಾನಂದ ಗೌಡರಿಗೆ ಅದ್ದೂರಿ ಸ್ವಾಗತ
ಕೇಂದ್ರ ರೈಲ್ವೆ ಸಚಿವರಾದ ಬಳಿಕ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಡಿವಿ ಸದಾನಂದ ಗೌಡರನ್ನು ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರೈಲ್ವೆ ಇಲಾಖೆಗೆ ಹೊಸತನ ತುಂಬುತ್ತೇನೆ
ರೈಲ್ವೆ ಇಲಾಖೆಗೆ ಹೊಸತನ ತುಂಬಿ, ರೈಲು ಎಂದರೆ ದೇಶದ ಅಭಿವೃದ್ಧಿ ಎಂಬ ಪರಿಕಲ್ಪನೆಯಡಿ ಇಲಾಖೆಗೆ ಹೊಸ ರೂಪು ನೀಡಲು ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಪ್ರಯತ್ನ ನಡೆಸುತ್ತೇನೆ ಎಂದು ಸದಾನಂದ ಗೌಡರು ಜನರಿಗೆ ಭರವಸೆ ನೀಡಿದರು.

ಬುಲೆಟ್ ಹಾಗೂ ಹೈಸ್ಪೀಡ್ ರೈಲು ಸಂಚಾರ
ಮಾಜಿ ಪ್ರಧಾನಿ ವಾಜಪೇಯಿ ಅವರು ಈ ಹಿಂದೆ ತೋರಿಸಿರುವ ಮಾದರಿ ಹೊಸತನದೊಂದಿಗೆ ನರೇಂದ್ರ ಮೋದಿ ಅವರ ಕಲ್ಪನೆಯ ಬುಲೆಟ್ ಹಾಗೂ ಸ್ಪೀಡ್ ರೈಲುಗಳನ್ನು ಓಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಘೋಷಣೆಯ ಬದಲಾಗಿ ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸಲು ಗಮನಹರಿಸುವುದಾಗಿ ಸದಾನಂದ ಗೌಡರು ಹೇಳಿದರು.

ಹಂತ-ಹಂತವಾಗಿ ಕೆಲಸ ಮಾಡುತ್ತೇನೆ
ರೈಲ್ವೆ ಇಲಾಖೆಯಲ್ಲಿ ಬದಲಾವಣೆ ತರುವ ಆಶಯವನ್ನು ಹೊಂದಿದ್ದೇನೆ. ಒಂದೇ ವರ್ಷದಲ್ಲಿ ಎಲ್ಲವನ್ನೂ ಮಾಡುತ್ತೇನೆಂಬ ಭರವಸೆ ನಾನು ನೀಡಲಾರೆ. ಆದರೆ ಐದು ವರ್ಷಗಳಲ್ಲಿ ಹಂತ ಹಂತವಾಗಿ ಉತ್ತಮ ಕೆಲಸವನ್ನು ಮಾಡುತ್ತೇನೆ ಎಂದರು.

ಬಜೆಟ್ ಬಗ್ಗೆ ಅಧ್ಯಯನ ನಡೆಸಬೇಕು
ಹಿಂದೆ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅಂತಿಮವಾಗಿ ಮಂಡಿಸಿರುವ ಬಜೆಟ್ ಹೊರೆಯನ್ನು ತಾವಿನ್ನು ಭರಿಸಬೇಕಾಗಿದೆ ಎಂದು ಹೇಳಿದ ಸದಾನಂದ ಗೌಡರು, ಹಲವಾರು ಯೋಜನೆಗಳನ್ನು ಘೋಷಿಸಲಾಗಿದ್ದರೂ ಅನುಷ್ಠಾನ ಆಗಿಲ್ಲ. ಅವೆಲ್ಲವನ್ನೂ ಸರಿದೂಗಿಸಿಕೊಂಡು ಸುಮಾರು ಒಂದು ತಿಂಗಳ ಕಾಲ ಬಜೆಟ್ ಬಗ್ಗೆ ಅಧ್ಯಯನ ನಡೆಸಿ, ಮುಂದಿನ ಕಾರ್ಯತಂತ್ರದ ಕುರಿತು ಆಲೋಚಿಸುತ್ತೇನೆ ಎಂದು ಹೇಳಿದರು.

ನಿಮ್ಮ ಆಶೀರ್ವಾದಿಂದ ಇಂತಹ ಹುದ್ದೆ ದೊರಕಿದೆ
ತಾವು ಇಂತಹ ಹುದ್ದೆ ಪಡೆಯಲು ಕರಾವಳಿ ಜನರ ಆಶೀರ್ವಾದ ಕಾರಣ ಎಂದು ಸದಾನಂದ ಗೌಡರು ನೆನಪು ಮಾಡಿಕೊಂಡರು. ಜನರಿಗೆ ಕೃತಜ್ಞತೆ ಸಲ್ಲಿಸಿದ ಅವರು, ತಮಗೆ ಸಹಕಾರ ನೀಡಿದ ಪಕ್ಷದ ಹಿರಿಯರಾದ ವಿ.ಎಸ್. ಆಚಾರ್ಯ, ನಾರಾಯಣ ಶೆಟ್ಟಿ, ಕರಂಬಳ್ಳಿ ಸಂಜೀವ ಶೆಟ್ಟಿ, ಸಿ.ಜಿ. ಕಾಮತ್ ಮುಂತಾದವರನ್ನು ನೆನಪಿಸಿಕೊಂಡರು.

ನಳೀನ್ ಕುಮಾರ್ ಉಪಸ್ಥಿತಿ
ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಸಂಜೀವ ಮಠಂದೂರು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ನಾಯಕರಾದ ಗಣೇಶ್ ಕಾರ್ಣಿಕ್, ಕುಂಬಳೆ ಸುಂದರ ರಾವ್, ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.











Click it and Unblock the Notifications