ನೆಟ್ಟಣ, ಬಿಳಿನೆಲೆ ಜನರಿಗೆ ಯಾವಾಗಲೂ ಆನೆ ಬಂದೀತೋ ಎಂಬುದೇ ಆತಂಕ
ಮಂಗಳೂರು, ಡಿಸೆಂಬರ್ 08: ಇತ್ತೀಚೆಗೆ ಬೆಳ್ತಂಗಡಿ ಪರಿಸರದಲ್ಲಿ ಹಾಡಹಗಲೇ ಕಾಣಿಸಿಕೊಂಡಿದ್ದ ಕಾಡಾನೆ ಈಗ ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ. ಕಳೆದ ಕೆಲವು ದಿನಗಳಿಂದ ನಾಡಿನಿಂದ ದೂರ ಉಳಿದಿದ್ದ ಕಾಡಾನೆಗಳು ಈಗ ಪುತ್ತೂರು ತಾಲೂಕಿನ ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ನೆಟ್ಟಣ, ಬಿಳಿನೆಲೆ ಪರಿಸರದ ಜನರಲ್ಲಿ ಭಯಭೀತರಾಗಿದ್ದಾರೆ.
ನೆಟ್ಟಣ ಪೇಟೆಯಲ್ಲಿನ ಅಬ್ದುಲ್ ರಹಮಾನ್ ಹಾಜಿ ಎಂಬವರ ಮನೆಯ ಪಕ್ಕದ ತೋಟದ ಬೇಲಿಯನ್ನು ಧ್ವಂಸಗೊಳಿಸಿರುವ ಕಾಡಾನೆ ತೆಂಗಿನ ಮರವನ್ನು ಹಾನಿ ಮಾಡಿದೆ. ಇನ್ನೊಂದೆಡೆ ಬಿಳಿನೆಲೆಯಲ್ಲೂ ಕಾಡಾನೆಯ ಪುಂಡಾಟ ಜೋರಾಗಿದ್ದು, ಮನೆಯೊಂದರ ತಡೆಗೋಡೆಯನ್ನೇ ಕೆಡವಿ ಹಾಕಿದೆ.
ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು!
ಬಿಳಿನೆಲೆಯಲ್ಲಿರುವ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಪ್ರವಾಸ ಹೊರಟಿದ್ದು, ಆ ಹಿನ್ನೆಲೆಯಲ್ಲಿ ರಾತ್ರಿ ಪೋಷಕರೊಬ್ಬರು ಶಾಲೆಗೆ ತೆರಳಿ ಹಿಂದಿರುಗುತ್ತಿದ್ದಾಗ ಕಾಡಾನೆ ಅಟ್ಟಿಸಿಕೊಂಡು ಹೋಗಿದೆ ಎಂದು ಹೇಳಲಾಗಿದೆ. ಜನನಿಬಿಡ ಪ್ರದೇಶಕ್ಕೂ ಕಾಡಾನೆ ಲಗ್ಗೆ ಇಟ್ಟಿರುವುದು ಈ ಪರಿಸರದ ಜನರ ಆತಂಕಕ್ಕೆ ಕಾರಣವಾಗಿದೆ.