ಬಿಜೆಪಿ ನಾಯಕರ ಸಭೆಗೆ ಕೋವಿಡ್ ನಿಯಮ ಇಲ್ವಾ?; ಯು. ಟಿ. ಖಾದರ್
ಮಂಗಳೂರು, ಜೂನ್ 17; "ಶಾಸಕರು ಸಭೆ ಕರೆಯಿರಿ ಅಂದು ಹೇಳಿದರೆ ಕೊರೊನಾ ನಿಯಮ ಅಂತಾ ಹೇಳುತ್ತಾರೆ. ಆದರೆ ಈಗ ಅಧಿಕಾರ ಕಚ್ಚಾಟಕ್ಕೆ ಸಭೆ ಸೇರಿದರೆ ಕೋವಿಡ್ ನಿಯಮ ಅನ್ವಯ ಆಗಲ್ವಾ?" ಎಂದು ಮಾಜಿ ಸಚಿವ ಯು. ಟಿ. ಖಾದರ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯು. ಟಿ. ಖಾದರ್, "ರಾಜ್ಯ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಕಚ್ಚಾಟದಿಂದಾಗಿ ರಾಜ್ಯದ ಜನರಿಗೆ ದ್ರೋಹವಾಗುತ್ತಿದೆ" ಎಂದು ಹೇಳಿದರು.
"ರಾಜ್ಯದ ಜನರು ಕೋವಿಡ್ ಭಯದಿಂದ ದಿನ ಕಳೆಯುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ನೋವು, ಕಷ್ಟದ ಬಗ್ಗೆ ಕರುಣೆಯಿಲ್ಲ. ಕೊವೀಡ್ ನಿಯಂತ್ರಣಕ್ಕೆ ಸಭೆ ಕರೆದಿಲ್ಲ. ಶಾಸಕರು ಸಭೆ ಕರೆಯಿರಿ ಎಂದು ಹೇಳಿದರೆ ಕೊರೊನಾ ನಿಯಮ ಎಂದು ಹೇಳುತ್ತಾರೆ. ಆದರೆ ಈಗ ಅಧಿಕಾರ ಕಚ್ಚಾಟಕ್ಕೆ ಸಭೆ ಸೇರಿದರೆ ನಿಯಮ ಅನ್ವಯ ಆಗಲ್ವಾ?" ಎಂದರು.

"ಬಿಜೆಪಿ ನಡವಳಿಕೆಯಿಂದ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದ ಗೌರವ, ಘನತೆಗೆ ಧಕ್ಕೆಯಾಗಿದೆ. ಸರ್ಕಾರ ರಾಜಕೀಯ ಜಂಜಾಟವನ್ನು ಒಂದು ತಿಂಗಳು ಮುಂದೆ ಹಾಕಲಿ. ಈಗಲಾದರೂ ಜನರ ಕಷ್ಟದ ಬಗ್ಗೆ ಗಮನಹರಿಸಲಿ" ಎಂದು ಯು. ಟಿ. ಖಾದರ್ ವಾಗ್ದಾಳಿ ನಡೆಸಿದರು.
"ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಇತಿಹಾಸದಲ್ಲಿ ನೋಡದ ಸಾಧನೆ ಈ ಮೂಲಕ ಆಗಿದೆ. ಪೆಟ್ರೋಲ್, ಡಿಸೇಲ್ನಲ್ಲಿ ಶತಕ ಬಾರಿಸುವ ಮೂಲಕ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದೆ" ಎಂದು ಟೀಕಿಸಿದರು.
"ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲ. ಪೆಟ್ರೋಲ್ ತೆರಿಗೆ ಮೂಲಕ ಖಜಾನೆ ತುಂಬುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಖರೀದಿಸಲು ಜನ ಕೆಲಸಕ್ಕೆ ಹೋಗುವಂತಾಗಿದೆ. ಪೆಟ್ರೋಲ್, ಡಿಸೇಲ್ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದರೆ ಆರ್ಥಿಕತೆಯ ಭಾರ ಪರೋಕ್ಷವಾಗಿ ಜನರ ಮೇಲೆ ಬೀರುತ್ತಿದೆ" ಎಂದರು.
"ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಬಂಧ ಅಂತಾ ಹೇಳುತ್ತಾರೆ. ಆದರೆ ಚುನಾವಣೆ ಬರುವಾಗ ಬೆಲೆ ಕಡಿಮೆಯಾಗುತ್ತದೆ" ಎಂದು ಖಾದರ್ ಆರೋಪಿಸಿದರು.












Click it and Unblock the Notifications