ಮಧುಕರ್ ಶೆಟ್ಟಿ ಅಂತಿಮ ದರ್ಶನ: ಮಂಗಳೂರಿನಲ್ಲಿಬಿಜೆಪಿ ನಾಯಕರು ಗೈರು
ಮಂಗಳೂರು, ಡಿಸೆಂಬರ್ 30: ಖಡಕ್ ಐಪಿಎಸ್ ಅಧಿಕಾರಿ ಡಾ ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರಕ್ಕೆ ಮಂಗಳೂರಿನಲ್ಲಿ ಗೌರವ ಸಲ್ಲಿಸಲು ಬಿಜೆಪಿ ನಾಯಕರು ಗೈರಾಗಿದ್ದಾರೆ. ಈ ಕುರಿತು ಈಗ ಆಕ್ರೋಶ ವ್ಯಕ್ತವಾಗಿದೆ.
ಹೈದ್ರಾಬಾದಿನಲ್ಲಿ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರ ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರಿಗೆ ನಿನ್ನೆ ಶನಿವಾರ ರಾತ್ರಿ ತಲುಪಿತು. ಮಧುಕರ್ ಶೆಟ್ಟಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಅಗಲಿದ ಅಧಿಕಾರಿಯ ದರ್ಶನಕ್ಕಾಗಿ ಅಭಿಮಾನಿಗಳು, ನೂರಾರು ಸಾರ್ವಜನಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಅಭಯಚಂದ್ರ ಜೈನ್ ಮತ್ತಿತರ ಕಾಂಗ್ರೆಸ್ ನಾಯಕರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು.

ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಶಾಸಕರು,ಇಬ್ಬರು ಎಂಪಿಗಳಿದ್ದರೂ, ಯಾವೊಬ್ಬ ಶಾಸಕರೂ ಅಂತಿಮ ದರ್ಶನಕ್ಕೆ ಬರದೇ ದೂರವುಳಿದಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಎಸ್ಪಿಯಾಗಿದ್ದ ಮಧುಕರ್ ಶೆಟ್ಟಿ ಬಳ್ಳಾರಿ ಮೈನಿಂಗ್, ಡಿ ನೋಟಿಫಿಕೇಶನ್ ವಿಚಾರದಲ್ಲಿ ಮಂತ್ರಿಗಳು ಜೈಲು ಸೇರುವಂತೆ ಮಾಡಿದ್ದರು.

ಇಂದು ಸಾವನ್ನಪ್ಪಿದ ಅಧಿಕಾರಿಯನ್ನು ನೆನೆದು ರಾಜ್ಯದೆಲ್ಲೆಡೆ ಕಂಬನಿ ಮಿಡಿಯುತ್ತಿರುವ ಮಧ್ಯೆ ಬಿಜೆಪಿ ನಾಯಕರು ಕಾರ್ಯಕ್ರಮದಿಂದ ಉದ್ದೇಶಪೂರ್ವಕ ದೂರವುಳಿದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ವತಿಯಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಸರಕಾರದ ಪರವಾಗಿ ತಾನು ಜೊತೆಗಿರುತ್ತೇನೆಂದು ಸಚಿವ ಯು.ಟಿ.ಖಾದರ್ ಪಾರ್ಥಿವ ಶರೀರದ ಜೊತೆ ಉಡುಪಿಗೆ ತೆರಳಿದ್ದು, ಬಿಜೆಪಿ ಶಾಸಕರ ಗೈರು ಹಾಜರಿ ಎದ್ದು ಕಾಣುವಂತಾಯ್ತು.












Click it and Unblock the Notifications