ಬಾಳಿಗಾ ಕೊಲೆ ಪ್ರಕರಣ ಮರು ತನಿಖೆಗೆ ಸಂಬಂಧಿಕರ ಆಗ್ರಹ
ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಬಾಳಿಗ ಸಹೋದರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಮಂಗಳೂರು, ಮಾರ್ಚ್ 28: ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಎರಡನೇ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟಿನ ಪ್ರಥಮ ದರ್ಜೆ (ಜೆಎಂಎಫ್ ಸಿ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿರುವ ವಿನಾಯಕ ಬಾಳಿಗಾ ಸಹೋದರಿ ಅನುರಾಧಾ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಸಹೋದರನ ಕೊಲೆ ಪ್ರಕರಣದ ಹಿಂದಿನ ಸತ್ಯಾಂಶವನ್ನು ಬೇಧಿಸಿ ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ದೂರಿರುವ ಅನುರಾಧಾ, ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.[ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ ಮೇಲೆ ಮತ್ತೊಂದು ಎಫ್ಐಆರ್]

ಎಪ್ರಿಲ್ 22ರಂದು ಈ ಕುರಿತ ತಕರಾರು ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ಬಾಳಿಗಾ ಸಹೋದರಿಗೆ ಸೂಚಿಸಿದ್ದಾರೆ.
ಕಳೆದ ವರ್ಷ (2016) ಮಾರ್ಚ್ 21ರಂದು ಕೊಡಿಯಾಲಬೈಲಿನಲ್ಲಿ ತನ್ನ ಮನೆ ಮುಂಭಾಗ ದುಷ್ಕರ್ಮಿಗಳಿಂದ ವಿನಾಯಕ ಬಾಳಿಗಾ ಹತ್ಯೆಗೀಡಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ನಮೋ ಬ್ರಿಗೇಡ್ ಸಂಘಟನೆ ಸ್ಥಾಪಕ ಹಾಗೂ ಸದ್ಯ ಯುವ ಬ್ರಿಗೇಡಿನಲ್ಲಿ ತೊಡಗಿಸಿಕೊಂಡಿರುವ ನರೇಶ್ ಶೆಣೈ ಮತ್ತು ಆತನ ಆರು ಮಂದಿ ಸಹಚರರನ್ನು ಬಂಧಿಸಿದ್ದರು. ಈಗಾಗಲೇ ಇವರೆಲ್ಲರ ವಿರುದ್ಧ ಪ್ರಾಥಮಿಕ ಚಾರ್ಜಶೀಟ್ ದಾಖಲಿಸಲಾಗಿದೆ.[ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ]
ಕೆಲ ದಿನಗಳ ಹಿಂದೆ ಅನುರಾಧಾ ಬಾಳಿಗಾ ಮತ್ತು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳೂರಿನ ರಥಬೀದಿಯಿಂದ ಬಾಳಿಗಾ ನಿವಾಸದವರೆಗೆ ಕಾಲ್ನಡಿಗೆ ಮೆರವಣಿಗೆ ನಡೆಸಿದ್ದರು. ಬಾಳಿಗಾ ಕೊಲೆ ನಡೆದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಗಿತ್ತು.












Click it and Unblock the Notifications