ಬಾಳಿಗಾ ಕೊಲೆ ಪ್ರಕರಣ ಮರು ತನಿಖೆಗೆ ಸಂಬಂಧಿಕರ ಆಗ್ರಹ
ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಬಾಳಿಗ ಸಹೋದರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಮಂಗಳೂರು, ಮಾರ್ಚ್ 28: ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಎರಡನೇ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟಿನ ಪ್ರಥಮ ದರ್ಜೆ (ಜೆಎಂಎಫ್ ಸಿ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿರುವ ವಿನಾಯಕ ಬಾಳಿಗಾ ಸಹೋದರಿ ಅನುರಾಧಾ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಸಹೋದರನ ಕೊಲೆ ಪ್ರಕರಣದ ಹಿಂದಿನ ಸತ್ಯಾಂಶವನ್ನು ಬೇಧಿಸಿ ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ದೂರಿರುವ ಅನುರಾಧಾ, ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.[ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ ಮೇಲೆ ಮತ್ತೊಂದು ಎಫ್ಐಆರ್]
ಎಪ್ರಿಲ್ 22ರಂದು ಈ ಕುರಿತ ತಕರಾರು ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ಬಾಳಿಗಾ ಸಹೋದರಿಗೆ ಸೂಚಿಸಿದ್ದಾರೆ.
ಕಳೆದ ವರ್ಷ (2016) ಮಾರ್ಚ್ 21ರಂದು ಕೊಡಿಯಾಲಬೈಲಿನಲ್ಲಿ ತನ್ನ ಮನೆ ಮುಂಭಾಗ ದುಷ್ಕರ್ಮಿಗಳಿಂದ ವಿನಾಯಕ ಬಾಳಿಗಾ ಹತ್ಯೆಗೀಡಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ನಮೋ ಬ್ರಿಗೇಡ್ ಸಂಘಟನೆ ಸ್ಥಾಪಕ ಹಾಗೂ ಸದ್ಯ ಯುವ ಬ್ರಿಗೇಡಿನಲ್ಲಿ ತೊಡಗಿಸಿಕೊಂಡಿರುವ ನರೇಶ್ ಶೆಣೈ ಮತ್ತು ಆತನ ಆರು ಮಂದಿ ಸಹಚರರನ್ನು ಬಂಧಿಸಿದ್ದರು. ಈಗಾಗಲೇ ಇವರೆಲ್ಲರ ವಿರುದ್ಧ ಪ್ರಾಥಮಿಕ ಚಾರ್ಜಶೀಟ್ ದಾಖಲಿಸಲಾಗಿದೆ.[ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ]
ಕೆಲ ದಿನಗಳ ಹಿಂದೆ ಅನುರಾಧಾ ಬಾಳಿಗಾ ಮತ್ತು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳೂರಿನ ರಥಬೀದಿಯಿಂದ ಬಾಳಿಗಾ ನಿವಾಸದವರೆಗೆ ಕಾಲ್ನಡಿಗೆ ಮೆರವಣಿಗೆ ನಡೆಸಿದ್ದರು. ಬಾಳಿಗಾ ಕೊಲೆ ನಡೆದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಗಿತ್ತು.