'ಇಷ್ಟು ಗುಂಡು ಹಾರಿಸಿಯೂ ಒಬ್ಬನೂ ಸಾಯಲಿಲ್ಲವಲ್ಲ': ವೈರಲ್ ವಿಡಿಯೋ
ಮಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿರುವುದು ರಾಜ್ಯ ಪೊಲೀಸರ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ಒಬ್ಬ ವ್ಯಕ್ತಿಗೆ ಹಿಂದಿನಿಂದ ಗುಂಡೇಟು ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆ ದೃಢಪಟ್ಟಿಲ್ಲ. ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನೌಸೀನ್ (23) ಮತ್ತು ಜಲೀಲ್ ಕುದ್ರೋಳಿ (49) ಎಂಬುವವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಇಷ್ಟು ಗುಂಡು ಹಾರಿಸಿದರೂ ಒಬ್ಬನೂ ಸತ್ತಿಲ್ಲವಲ್ಲ ಎಂದು ಪೊಲೀಸರು ಹೇಳುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮಂಗಳೂರಿನ ಸ್ಥಳವೊಂದರಲ್ಲಿ ಗುರುವಾರ ಒಟ್ಟಿಗೆ ನಿಂತಿದ್ದ ಪೊಲೀಸರ ಗುಂಪಿನ ಮಾತುಕತೆಯ ಹತ್ತು ಸೆಕೆಂಡುಗಳ ವಿಡಿಯೋ ವಾಟ್ಸಾಪ್ ಮತ್ತು ಫೇಸ್ಬುಕ್ಗಳಲ್ಲಿ ಹರಿದಾಡುತ್ತಿದೆ. 'ಅಲ್ಲಪ್ಪಾ, ಇಷ್ಟು ಗುಂಡು ಹಾರಿಸಿದ್ದೀವಿ. ಒಬ್ಬನೂ ಸಾಯಲಿಲ್ಲವಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಹೋದ್ಯೋಗಿಗಳಿಗೆ ಹೇಳುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವಿಡಿಯೋದ ಖಚಿತತೆ ಬಗ್ಗೆ ಯಾವುದೇ ಸ್ಪಷ್ಟನೆ ದೊರೆತಿಲ್ಲ.
ಪೊಲೀಸರ ನಡೆ ಆಘಾತಕಾರಿ
ಪೊಲೀಸರ ಈ ಮಾತುಕತೆ ಆಘಾತಕಾರಿಯಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರ ಹೇಳಿಕೆ ವೇಳೆ ಒಂದು ಬದಿಯಲ್ಲಿ ಮಂಗಳೂರು ಪೊಲೀಸರು 'ಅಪರಾಧ ತಡೆ ಮಾಸಾಚರಣೆ'ಯ ಬೃಹತ್ ಫ್ಲೆಕ್ಸ್ ಹಾಕಿರುವುದು ಕಾಣಿಸುತ್ತದೆ. ಇದು ಪರಿಸ್ಥಿತಿಯ ವ್ಯಂಗ್ಯವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.
| Array |
ಪರಿಸ್ಥಿತಿ ನಿಯಂತ್ರಣದಲ್ಲಿದೆ
ಗುರುವಾರ ರಾತ್ರಿಯಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಶಾಂತಯುತವಾಗಿವೆ. ನಗರದಲ್ಲಿ ಕರ್ಫ್ಯೂ ಹೇರಿಕೆಯಾಗಿದೆ ಎಂದು ಜನರು ಆತಂಕ ಪಡುವ ಅಗತ್ಯವಿಲ್ಲ. ನಗರದ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ತಿಳಿಸಿದ್ದಾರೆ.

ಈ ವಿಚಾರದಲ್ಲಿ ರಾಜಕೀಯ ಬೇಡ
ನಿನ್ನೆ ರಾತ್ರಿಯಿಂದ ಮಂಗಳೂರು, ಬೆಂಗಳೂರು ಮತ್ತು ಇತರೆಡೆ ಶಾಂತಿಯ ವಾತಾವರಣ ಇದೆ. ಧಾರ್ಮಿಕ ಮುಖಂಡರ ಜೊತೆ ಕೂಡಾ ಚರ್ಚೆ ಮಾಡಿದ್ದೇವೆ. ಎಲ್ಲೆಡೆ ಶಾಂತಿಯುತವಾದ ವಾತಾವರಣ ಇದೆ. ಕಾಂಗ್ರೆಸ್ ನಾಯಕರು ಮಂಗಳೂರಿಗೆ ಹೋಗುವ ವಿಚಾರ ನನಗೆ ಗೊತ್ತಿಲ್ಲ. ಆದರೆ ಇಂತಹ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಿನ್ನೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ವಿವರಿಸಿದ್ದೇನೆ. ಶಾಂತಿ ಭಂಗ ಆಗದಂತೆ ನೋಡಿಕೊಳ್ಳಲು ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಮಾಜ್ಗಾಗಿ ಕರ್ಫ್ಯೂ ಸಡಿಲಿಕೆ
ಗುರುವಾರ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರು ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಶವಾಗಾರದ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶುಕ್ರವಾರ ನಮಾಜ್ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಧ್ಯಾಹ್ನ 12 ರಿಂದ 2 ಗಂಟೆಯವರೆಗ ಕರ್ಫ್ಯೂ ಸಡಿಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ವಿವಿಧೆಡೆ ಅಂತರ್ಜಾಲ ಸೇವೆ ಕಡಿತಗೊಳಿಸಲಾಗಿದೆ.












Click it and Unblock the Notifications