ಅತಿಥಿ- ಅಭ್ಯಾಗತರಿಗೆ ಮದುಮಕ್ಕಳೇ ಉಡುಗೊರೆ ಕೊಟ್ಟ ಅಪರೂಪದ ಮದುವೆ
Recommended Video

ಮಂಗಳೂರು, ಜೂನ್ 21: ದೂರದ ಮನೆಯೊಂದರ ಅಂಗಳದಲ್ಲಿ ಗಿಡ ಒಂದು ಬೆಳೆದು, ಅದು ನೀಡುವ ರುಚಿಕರ ಹಣ್ಣನ್ನು ಸೇವಿಸುತ್ತಾ, ಅದೊಂದು ವಿಶಿಷ್ಟ ಮದುವೆಯ ಬಗ್ಗೆ ಚರ್ಚಿಸಿ, ಆ ವಧು- ವರರನ್ನು ನೆನೆದು ಮತ್ತೊಮ್ಮೆ ಹರಸಬೇಕು. ಆ ಗಿಡವು ಮರವಾಗಿ ಬೆಳೆದು, ನೂರಾರು ಕಾಲ ಜನರಿಗೆ ಆಸರೆಯಾಗಬೇಕು.
ಎರಡು ಪುಟ್ಟ ಹೃದಯಗಳಲ್ಲಿ ಮೊಳಕೆಯೊಡೆದ ಈ ಕನಸು, ಪರಿಕಲ್ಪನೆ ಎಷ್ಟು ಸುಂದರ ಅಲ್ಲವೆ? ಇಂತಹ ಕನಸನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವ ಜೋಡಿ ಕಂಡಿತ್ತು. ಆದನ್ನು ತಮ್ಮ ಮದುವೆಯ ಸಂದರ್ಭದಲ್ಲಿ ಸಾಕಾರಗೊಳಿಸಿತು. ಮದುವೆ, ಮರ, ಹಣ್ಣು , ನೂರಾರು ವರ್ಷ, ನೆನಪು... ಈ ಎಲ್ಲವನ್ನು ಒಳಗೊಂಡ ಮದುವೆ ಪ್ರಸಂಗ ಇಲ್ಲಿದೆ.
'ಮದುವೆ' ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸು, ಪರಿಕಲ್ಪನೆಗಳಿರುತ್ತವೆ. ತಮ್ಮದೇ ಚಿಂತನೆಗಳಿರುತ್ತವೆ. ತಮ್ಮ ಮದುವೆಯನ್ನು ನೂರಾರು ಕಾಲ ಜನ ನೆನೆಯಬೇಕು ಎಂದಿರುತ್ತದೆ. ಹೀಗೆ ಕನಸು ಕಂಡವರು ಮುರಳಿ ಕೃಷ್ಣ ಹಸಂತಡ್ಕ ಮತ್ತು ಮಂಜುಳಾ. ಅಂದಹಾಗೆ ಮುರಳಿಕೃಷ್ಣ ಅವರ ಮನದಲ್ಲಿ ಮೊಳಕೆಯೊಡೆದ ಈ ಪರಿಕಲ್ಪನೆಗೆ ಮಂಜುಳಾ ನೀರೆರೆದರು.

ಮುರಳಿ ಕೃಷ್ಣ -ಮಂಜುಳಾ ಹಸೆಮಣೆ ಏರಿದರು
ತಮ್ಮ ಮದುವೆಗೆ ಬರುವವರು ಸದಾಕಾಲ ಆ ಶುಭ ಗಳಿಗೆಯನ್ನು ನೆನೆಯಲು, ನೂರಾರು ಕಾಲ ಬಾಳಿ- ಬದುಕುವ ಹಣ್ಣಿನ ಗಿಡಗಳನ್ನು ಅತಿಥಿ- ಅಭ್ಯಾಗತರಿಗೆ ನೀಡಲು ತೀರ್ಮಾನಿಸಿದರು. ಗುರುವಾರದಂದು (ಜೂನ್ 21) ಅದ್ಧೂರಿ ಮದುವೆ ಸಮಾರಂಭಗಳ ಮಧ್ಯೆ ವಿಶಿಷ್ಟ ರೀತಿಯಲ್ಲಿ ಮುರಳಿ ಕೃಷ್ಣ ಹಾಗೂ ಮಂಜುಳಾ ಹಸೆಮಣೆ ಏರಿದರು.

ಎಲ್ಲರಿಗೂ ಒಂದೊಂದು ಹಣ್ಣಿನ ಗಿಡದ ಉಡುಗೊರೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚದಲ್ಲಿ ನಡೆದ ಈ ಮದುವೆ ಕಾರ್ಯಕ್ಕೆ ಹೋದವರೆಲ್ಲ ಕೈಯಲ್ಲಿ ಒಂದೊಂದು ಹಣ್ಣಿನ ಗಿಡ ಹಿಡಿದುಕೊಂಡಿದ್ದರು. ಪುಣಚದ ಮಹಿಷಮರ್ದಿನಿ ದೇವಾಲಯದ ಸಭಾಂಗಣದಲ್ಲಿ ನಡೆದ ಈ ಮದುವೆಗೆ ಬಂದ ಪ್ರತಿಯೋಬ್ಬರಿಗೂ ಗಿಡ ಬೆಳೆಸಿ ಪೋಷಿಸುವ ಕುರಿತು ಜಾಗೃತಿ ಮೂಡಿಸಲಾಯಿತು.

ರಕ್ತಚಂದನ- ಶ್ರೀಗಂಧದ ಗಿಡ ಕೂಡ ನೀಡಲಾಯಿತು
ಮದುವೆಗೆ ಬಂದವರಿಗೆಲ್ಲ ರಕ್ತಚಂದನ, ಶ್ರೀಗಂಧ ಸೇರಿದಂತೆ ಹಣ್ಣಿನ ಗಿಡಗಳನ್ನು ನೀಡಲಾಯಿತು. ಈಗ ಮಳೆಗಾಲ ಆದ ಕಾರಣ ಗಿಡ ಬೆಳೆಸಲು ಸೂಕ್ತ ಸಮಯ. ಈ ಹಿನ್ನೆಲೆಯಲ್ಲಿ ಗಿಡಗಳನ್ನು ಮದುವೆಗೆ ಬಂದ ಅತಿಥಿ- ಅಭ್ಯಾಗತರಿಗೆಲ್ಲ ಕೊಟ್ಟು ಅದನ್ನು ಪೋಷಿಸಲು ಪ್ರೇರಣೆ ನೀಡಲಾಯಿತು.

ಪರಿಸರ ಸಂರಕ್ಷಣೆಯ ಸಂದೇಶ
ಆ ಮೂಲಕ ಮದುವೆಯಲ್ಲೂ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಮದುವೆಗೆ ಬಂದಿದ್ದ ನೂರಾರು ಮಂದಿ ಗಿಡಗಳನ್ನು ಸಂತೋಷದಿಂದ ಸ್ವೀಕರಿಸಿದ್ದು ಮತ್ತೂ ವಿಶೇಷವಾಗಿತ್ತು. ಅಂತೂ ಮುರಳಿಕೃಷ್ಣ- ಮಂಜುಳಾ ಮದುವೆ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದಾಗಿರುತ್ತದೆ ಎಂಬ ಮಾತನ್ನೂ ಕೇಳುವಂತಾಯಿತು.












Click it and Unblock the Notifications