ಗೋ ಹತ್ಯೆ ನಿಷೇಧ ಎಲ್ಲೆಡೆ ಜಾರಿಗೊಳ್ಳಲಿ: ಡಿವಿಎಸ್
ಮಂಗಳೂರು, ಮಾ.8 : ಮಹಾರಾಷ್ಟ್ರ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿರುವುದನ್ನು ಸ್ವಾಗತಿಸಿರುವ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ದೇಶದ ಎಲ್ಲ ರಾಜ್ಯಗಳಲ್ಲಿ ಈ ಕಾನೂನು ಜಾರಿಯಾಗಬೇಕು ಎಂದು ಹೇಳಿದ್ದಾರೆ.
ದೇಶದ ಆರೇಳು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿತ್ತು. ಆದರೆ, ಕಾಂಗ್ರೆಸ್ ಸರಕಾರ ಅದನ್ನು ಹಿಂದಕ್ಕೆ ಪಡೆದಿರುವುದು ಸರಿಯಲ್ಲ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. [ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ]
ನಮ್ಮ ಸರ್ಕಾರ ರೈತ ಪರ: ಕೇಂದ್ರ ಸರಕಾರ ರೈತ ವಿರೋಧಿ ಕಾನೂನು ಜಾರಿಗೆ ತರುವುದಿಲ್ಲ. ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲಿದ್ದ ಭೂಸ್ವಾಧೀನ ಕಾನೂನಿಗೆ ಕೆಲವೊಂದು ತಿದ್ದುಪಡಿ ತಂದು ಮತ್ತೆ ಸದನದಲ್ಲಿ ಮಂಡಿಸಲಾಗುವುದು. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನತೆಯ ಅಭಿಪ್ರಾಯವನ್ನು ಗೌರವದಿಂದ ಸ್ವೀಕರಿಸುತ್ತೇವೆ ಎಂದರು.

ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ: ದಿಮಾಪುರದಲ್ಲಿ ಜೈಲಿನಿಂದ ಹೊರಗೆಳೆದು ಹತ್ಯೆ ಮಾಡಿರುವುದು ಬರ್ಬರ ಕೃತ್ಯ. ಕಾನೂನು ಅನುಷ್ಠಾನದಲ್ಲಿ ಲೋಪವಿದ್ದರೆ ಪ್ರತಿರೋಧ ವ್ಯಕ್ತಪಡಿಸಲು ಅವಕಾಶವಿದೆ. ಕಾನೂನು ತನ್ನ ಕಾರ್ಯನಿರ್ವಹಿಸುತ್ತದೆ. ಹಾಗೆಂದು ಕಾನೂನನ್ನು ನೇರವಾಗಿ ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಸಾರ್ವಜನಿಕರು ಇಂತಹ ಕೃತ್ಯವನ್ನು ವಿರೋಧಿಸಬೇಕು ಎಂದು ಅವರು ಹೇಳಿದರು. [ಕರ್ನಾಟಕ: ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಏನಿದೆ]
ಗಂಭೀರ ವಿಷಯ: ಜೈಲಿಗೆ ಪ್ರವೇಶಿಸಿ ಅತ್ಯಾಚಾರಿಯ ಸಂದರ್ಶನ ಮಾಡಲು ಅನುಮತಿ ನೀಡಿರುವುದು ಗಂಭೀರ ವಿಷಯ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ದೇಶದ ಆಂತರಿಕ ವಿಷಯ ಪ್ರಚಾರ ಮಾಡುವುದು ಯಾವುದೇ ಮಾಧ್ಯಮಕ್ಕೆ ಒಳ್ಳೆಯದಲ್ಲ. ಪ್ರಸಾರ ಮಾಡದಂತೆ ಆದೇಶಿಸಿದ್ದರೂ, ಬಿಬಿಸಿ ಅದನ್ನು ಉಲ್ಲಂಘಿಸಿರುವುದು ಖಂಡನೀಯ ಎಂದು ಅವರು ಹೇಳಿದರು. [ಅತ್ಯಾಚಾರಿ ಬೆತ್ತಲೆಗೊಳಿಸಿ ಕೊಂದು ಹಾಕಿದ 'ನಾಗಾ'ಗಳು]
ಗಡ್ಕರಿ ಜತೆ ಸಭೆ: ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಕುರಿತು ಮಾ.10ರಂದು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನಿವಾಸದಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ನಡೆಯಲಿದೆ. ಶಿರಾಡಿ ಘಾಟ್ನ 2ನೇ ಹಂತದ ಕಾಮಗಾರಿಗೆ ಸಿಂಗಲ್ ಟೆಂಡರ್ ಬಂದಿದ್ದು, ಈ ಬಗ್ಗೆ ಸಚಿವರ ಜತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications