ಅತ್ಯಾಚಾರಿ ಬೆತ್ತಲೆಗೊಳಿಸಿ ಕೊಂದು ಹಾಕಿದ 'ನಾಗಾ'ಗಳು
ಕೋಹಿಮಾ, ಮಾ.6: ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ನಿರ್ಭಯಾ ಕುರಿತ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಸಂದರ್ಭದಲ್ಲೇ ನಾಗಾಲ್ಯಾಂಡ್ ನಲ್ಲಿ ಅತ್ಯಾಚಾರಿಯೊಬ್ಬನನ್ನು ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
35 ವರ್ಷದ ಸಯ್ಯದ್ ಫರೀದ್ ಖಾನ್ (ಬಾಂಗ್ಲಾದೇಶದ ವಲಸಿಗ) ಎಂಬ ವ್ಯಕ್ತಿ ನೆರೆ ಮನೆಯ ಯುವತಿಯೊಬ್ಬಳ ಮೇಲೆ ಫೆ.23-24ರಂದು ಹಲವು ಬಾರಿ ಅತ್ಯಾಚಾರ ಎಸಗಿದ್ದ. ನಂತರ ಪೊಲೀಸರು ಫೆ.24ರಂದು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಸ್ಥಳೀಯ ನ್ಯಾಯಾಲಯ ಆರೋಪಿಗೆ ಪೊಲೀಸ್ ಕಸ್ಟಡಿ ವಿಧಿಸಿತ್ತು. ಖಾನ್ನನ್ನು ಧೀಮಾಪುರದ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಅತ್ಯಾಚಾರಕ್ಕೊಳಗಾದ ಯುವತಿ ನಾಗಾ ಸಮುದಾಯಕ್ಕೆ ಸೇರಿದ್ದು, ನಾಗಾ ವಿದ್ಯಾರ್ಥಿ ವೇದಿಕೆ, ವೆಸ್ಟರ್ನ್ ಸುಮಿ ಹೋಹೊ ಮತ್ತಿತರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿತ್ತು.

ಗುರುವಾರ ಸುಮಾರು 4 ಸಾವಿರದಷ್ಟಿದ್ದ ಪ್ರತಿಭಟನಾಕಾರರು, ಬಿಗಿ ಭದ್ರತೆ, ನಿಷೇಧಾಜ್ಞೆ ನಡುವೆ ಕೇಂದ್ರ ಕಾರಾಗೃಹಕ್ಕೆ ಮುತ್ತಿಗೆ ಹಾಕಿದ್ದಾರೆ. ಕಾರಾಗೃಹದ ಬಾಗಿಲುಗಳನ್ನು ಮುರಿದು ಒಳನುಗ್ಗಿ ಖಾನ್ನನ್ನು ಹೊರಗೆಳೆದು ತಂದಿದ್ದಾರೆ. ಅತ್ಯಾಚಾರಿಯನ್ನು ಬೆತ್ತಲುಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಸಾವಿರಾರು ಜನರಿಂದ ಹಲ್ಲೆಗೀಡಾಗಿ ತೀವ್ರವಾಗಿ ಗಾಯಗೊಂಡ ಖಾನ್ ರಸ್ತೆಯಲ್ಲೇ ಸಾವನ್ನಪ್ಪಿದ ಘಟನೆ ನಡೆದಿತ್ತು.
Massive protest against alleged rape case in Dimapur, Nagaland pic.twitter.com/NfHd9nf2qm
— ANI (@ANI_news) March 5, 2015 ಮುಖ್ಯಮಂತ್ರಿ ಪ್ರತಿಕ್ರಿಯೆ: ಜಾರಿಯಲ್ಲಿದ್ದ ನಿಷೇಧಾಜ್ಞೆ ಸಡಿಲಿಸಿದ್ದೇ ತಪ್ಪಾಗಿದೆ. ಇಲ್ಲದಿದ್ದರೆಉದ್ರಿಕ್ತ ಪ್ರತಿಭಟನಾಕಾರರು ಅತ್ಯಾಚಾರಿಯನ್ನು ಜೈಲಿನಿಂದ ಹೊರಗೆಳೆದು ತಂದು ಹೊಡೆದು ಸಾಯಿಸಿದ ಪ್ರಕರಣ ತಪ್ಪಿಸಬಹುದಿತ್ತು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜಿಲಾಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪ್ರಕರಣ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧೀಮಾಪುರದಲ್ಲಿ ಮತ್ತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದೇ ವೇಳೆ ನಿನ್ನೆ ನಡೆದ ಅತ್ಯಾಚಾರಿ ಹತ್ಯೆ, ಜೈಲು ಮುತ್ತಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣ ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಾಗಾಲ್ಯಾಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.












Click it and Unblock the Notifications