ಬಿಜೆಪಿಯ ಗೋಹತ್ಯೆ ನಿಷೇಧ ವಿಧೇಯಕ ರದ್ದು
ಬೆಂಗಳೂರು, ಆ.23: ಕಳೆದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ಯನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗೋ ಹತ್ಯೆ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.
ಇದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿ ರಾಜ್ಯಪಾಲರು ಕೂಡ ಸಹಿ ಹಾಕಲು ಸಹಿ ಹಾಕಲು ಹಿಂದೆ ಮುಂದೆ ನೋಡಿದ್ದರು. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಮಾಡಲು ಸಂಪುಟ ನಿರ್ಧಾರ ಮಾಡಿದೆ ಎಂದು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ

ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಏನಿದೆ: ಈ ವಿಧೇಯಕದ ಪ್ರಾಣಿ ಪದದ ವಿಶ್ಲೇಷಣೆಯಲ್ಲಿ ಹೋರಿ ಮತ್ತು ಎತ್ತು ಎನ್ನುವ ಪದ ಬಿಡಲಾಗಿದೆ.
*12 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಗೋವುಗಳ ವಧೆಗೆ ಇದ್ದ ಅವಕಾಶಕ್ಕೆ ತಿದ್ದಪಡಿ ತರಲಾಗಿದೆ. 12 ವರ್ಷದಲಾಗಿ 15 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಗೋವುಗಳ ವಧೆಗೆ ಅವಕಾಶ ನೀಡಲಾಗಿದೆ.
* ಕತ್ತರಿಸಲ್ಪಡುವ ಗೋವು 15 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನದು ಎಂಬುದನ್ನು ಪ್ರಮಾಣೀಕರಿಸುವ ಅಧಿಕಾರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಲಾಗಿದೆ.
* ಈ ತಿದ್ದುಪಡಿ ಮೂಲಕ ಶಿಕ್ಷೆ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಈ ಮೊದಲು ಸದರಿ ಕಾನೂನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ವಾಸ ಮತ್ತು 1,000 ರೂಪಾಯಿ ದಂಡ ವಿಧಿಸಲು ಅವಕಾಶ ಇತ್ತು.
* ಇನ್ನು ಮುಂದೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗೋವುಗಳನ್ನು ಕತ್ತರಿಸಿದರೆ, 1 ವರ್ಷಕ್ಕಿಂತ ಕಡಿಮೆ ಇಲ್ಲದ 7 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ವಾಸ ಹಾಗೂ 25 ಸಾವಿರ ರೂಪಾಯಿಗೆ ಕಡಿಮೆ ಇಲ್ಲದ 50 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಇದೆ.
*ಈ ಕಾನೂನಿನ ಇನ್ನಿತರ ಅಂಶಗಳ ಉಲ್ಲಂಘನೆಗೆ ಜೈಲು ವಾಸದ ಜೊತೆಗೆ 50 ಸಾವಿರ ರೂಪಾಯಿಗಿಂತ ಕಡಿಮೆ ಇಲ್ಲದ 1 ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡವನ್ನೂ ವಿಧಿಸಲು ತಿದ್ದುಪಡಿ ಅವಕಾಶ ನೀಡಿದೆ.
ಹಿಂದೆ ಏನಾಗಿತ್ತು: 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದಪಡಿ ತಂದು ಎರಡು ವರ್ಷದ ಹಿಂದೆ ಮಸೂದೆಯನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಅನುಮೋದಿಸಿ, ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಈ ವಿಧೇಯಕಕ್ಕೆ ಇನ್ನೂ ಅಂಕಿತ ಬಿದ್ದಿಲ್ಲ. ಆದರೆ, ಈ ಸಂಬಂಧ ಕೇಂದ್ರ ಗೃಹ ಇಲಾಖೆಯು ಒಂದಷ್ಟು ಸ್ಪಷ್ಟನೆಗಳನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಸದರಿ ತಿದ್ದುಪಡಿಗಳನ್ನು ಈ ಬಾರಿಯೂ ಪ್ರತಿಪಕ್ಷಗಳ ವಿರೋಧದ ನಡುವೆ ಅನುಮೋದಿಸಿದೆ. ಇನ್ನು ಇದು ರಾಜ್ಯಪಾಲರಿಗೆ ಕಳುಹಿಸಿ ಅಂಕಿತವಾದರೆ ಇದು ಕಾನೂನಾಗಿ ಜಾರಿಗೆ ಬರಲಿದೆ.
"ರೋಗಗ್ರಸ್ತ ಹಾಗೂ ಬಡಕಲು ಗೋವುಗಳನ್ನು ಮಾತ್ರ ಕಡಿಯಬೇಕು. ಚೆನ್ನಾಗಿರುವ, ಆರೋಗ್ಯವಂತ ದೈನಂದಿನ ಬದುಕಿಗೆ ಆಧಾರವಾಗಿರುವ ರಾಸುಗಳನ್ನು ಮುಟ್ಟಬಾರದು ಎನ್ನುವ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು" ಎಂದು ರಾಮಾ ಜೋಯಿಸ್ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನೂತನ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಜಾರಿಯಾಗದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಟಿಪ್ಪು ಸುಲ್ತಾನ್ ಸಂಯುಕ್ತ ರಂಗ(ಟಿಯುಎಫ್) ಜೊತೆಗೆ ಬೆಂಗಳೂರು ಕೋಮು ಸೌಹಾರ್ದ ವೇದಿಕೆ ಮಾನವ ಹಕ್ಕುಗಳ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.












Click it and Unblock the Notifications