ರಾಜ್ಯೋತ್ಸವ ದಿನದಂದು ತುಳುನಾಡ ರಕ್ಷಣಾ ವೇದಿಕೆಯಿಂದ ಕರಾಳ ದಿನಾಚರಣೆ
ಮಂಗಳೂರು, ನವೆಂಬರ್ 1: ರಾಜ್ಯದಲ್ಲಿ ಇಂದು ಸಂಭ್ರಮದ 62ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ, ರಾಜ್ಯದ ಗಡಿ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಕರಾಳ ದಿನ ಆಚರಿಸಿದೆ.
ತುಳುವರು ತಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಚಿತ್ರವನ್ನು ಬ್ಲ್ಯಾಕ್ ಡೇ ಎಂದು ಹಾಕುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿದ್ದಾರೆ.
ದಶಕಗಳಿಂದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ತುಳು ಭಾಷಿಗರು ಸರ್ಕಾರದ ಮುಂದೆ ಇಡುತ್ತಲೇ ಬಂದಿದ್ದಾರೆ. ಆದರೆ, ಅದ್ಯಾವುದೂ ಈಡೇರಿಲ್ಲ. ಪ್ರತಿ ಸರಕಾರ ತುಳು ಭಾಷೆಯನ್ನು ನಿರ್ಲಕ್ಷ್ಯಿಸಿದೆ ಎಂದು ತುಳುನಾಡು ರಕ್ಷಣಾ ವೇದಿಕೆ ಆರೋಪಿಸಿದೆ.

ತುಳುವರಿಗೆ ಉದ್ಯೋಗದಲ್ಲಿ ಅನ್ಯಾಯ
ತುಳು ಭಾಷಿಗರಿಗಿರುವುದು ಇದೊಂದೇ ಸಮಸ್ಯೆಯಲ್ಲ. ಭಾಷೆಗೆ ಮನ್ನಣೆ ನೀಡುವುದರ ಜೊತೆಗೆ ಕರಾವಳಿ ಜಿಲ್ಲೆಯಲ್ಲಿ ತಳವೂರಿರುವ ಬೃಹತ್ ಕಂಪನಿಗಳು ತುಳುವರಿಗೆ ಉದ್ಯೋಗವಕಾಶ ನೀಡುತ್ತಿಲ್ಲ. ದಶಕಗಳಿಂದ ಈ ಬೇಡಿಕೆ ಇದ್ದರೂ ಸರ್ಕಾರಗಳು ಸ್ಪಂದಿಸಿಲ್ಲ ಎನ್ನುವ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ
ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಕರಾಳ ದಿನಾಚರಣೆಯನ್ನು ಇಂದು ಮಂಗಳೂರಿನಲ್ಲಿ ಆಚರಿಸಲಾಯಿತು . ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು .

8ನೇ ಪರಿಚ್ಛೇಧಕ್ಕೆ ಸೇರಲಿಲ್ಲ ತುಳು
ಈ ಸಂದರ್ಭದಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜೆಪ್ಪು, "ತುಳುನಾಡಿನ ಅಭಿವೃದ್ಧಿ ಮತ್ತು ತುಳು ಭಾಷೆಯನ್ನು 8 ನೇ ಪರಿಚ್ಛೇಧಕ್ಕೆ ಸೇರಿಸುವ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ರಾಜಕೀಯ ಹಾಗೂ ಆಡಳಿತಶಾಹಿ ವ್ಯವಸ್ಥೆ ತೋರುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು .

ಎತ್ತಿನಹೊಳೆಯಿಂದ ಅನ್ಯಾಯ
ತುಳುನಾಡಿನ ಜೀವನಾಡಿಯಾಗಿರುವ ನೇತ್ರಾವತಿ ನದಿ ತಿರುವು ಮೂಲಕ ಎತ್ತಿನಹೊಳೆ ಯೋಜನೆ ಜಾರಿಗೆ ತಂದು ರಾಜ್ಯ ಸರ್ಕಾರ ತುಳುವರಿಗೆ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ತುಳುವರು ಕರಾಳ ದಿನವನ್ನು ಆಚರಿಸುತ್ತಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications