ನಡೆದುಕೊಂಡು ಹೋಗುತ್ತಿದ್ದವನಿಗೂ ಬಿತ್ತು ಫೈನ್; ಯಾಕಂತೀರಾ?
ಮಂಗಳೂರು, ಸೆಪ್ಟೆಂಬರ್ 28: ಸಂಚಾರಿ ನಿಯಮಗಳನ್ನು ಪಾಲಿಸದಿದ್ದವರಿಗೆ ಇತ್ತೀಚೆಗೆ ದುಬಾರಿ ದಂಡ ವಿಧಿಸುವುದು ಸುದ್ದಿಯಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ದಂಡದ ಮೊತ್ತವನ್ನೂ ಇಳಿಸಲಾಯಿತು.
ಆಗಿನಿಂದ ಒಂದಲ್ಲಾ ಒಂದು ಕಾರಣಕ್ಕೆ ಸಂಚಾರಿ ಪೊಲೀಸರ ದಂಡದ ವಿಚಾರ ಸುದ್ದಿಯಾಗುತ್ತಲೇ ಇದೆ. ಇಂದು ಮಂಗಳೂರಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಸಂಚಾರಿ ಪೊಲೀಸರು ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಐನೂರು ರೂಪಾಯಿ ದಂಡ ವಿಧಿಸಿ ಸುದ್ದಿಯಾಗಿದ್ದಾರೆ.
ದಂಡ ವಿಧಿಸಿದ ಪೊಲೀಸರಿಗೆ ಅಲ್ಲಿದ್ದವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಡೆದಿದ್ದು ಇಷ್ಟೆ. ಉಪ್ಪಿನಂಗಡಿಯ ಕಡಬಕ್ಕೆ ಬಂದಿದ್ದವನನ್ನು ಬಸ್ ಹತ್ತಿಸಲು ಬೈಕ್ ಸವಾರ ಕಡಬ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬರುತ್ತಿದ್ದ. ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಕಡಬ ಕಾಲೇಜ್ ಕ್ರಾಸ್ ಒಂದರ ಬಳಿ ಹೈವೇ ಪೊಲೀಸರು ನಿಂತಿದ್ದನ್ನು ದೂರದಿಂದಲೇ ಗಮನಿಸಿದ ಬೈಕ್ ಸವಾರ, ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ಹಿಂದಿರುಗಿದ್ದಾನೆ. ಆದರೆ ಇದನ್ನು ಗಮನಿಸಿದ್ದ ಪೊಲೀಸರು, ಬೈಕ್ ನಿಂದ ಇಳಿದ ಯುವಕನನ್ನು ಹಿಡಿದು ಆತನಿಗೆ ಹೆಲ್ಮೆಟ್ ಹಾಕಿಲ್ಲ ಎಂದು ಐನೂರು ರೂಪಾಯಿ ದಂಡ ವಿಧಿಸಿ ರಸೀದಿ ಕೊಟ್ಟಿದ್ದಾರೆ.
ಈ ಕುರಿತು ಸ್ಥಳೀಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ರಫ್ ಶೇಡಿಗುಂಡಿ ಮುಂತಾದವರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ "ಅವರು ಕಡಬ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದರು. ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಕಾನೂನು ಪ್ರಕಾರವೇ ದಂಡ ವಿಧಿಸಿದ್ದೇವೆ" ಎಂದು ಪೊಲೀಸರು ವಾದಿಸಿದ್ದಾರೆ. ಕೊನೆಗೆ ದಂಡದ ರಶೀದಿಯನ್ನೂ ಹಿಂಪಡೆದಿದ್ದಾರೆ.












Click it and Unblock the Notifications