Surathkal toll plaza : ಸುರತ್ಕಲ್ ಟೋಲ್ ಗೇಟ್ ವಿವಾದ: ಪ್ರತಿಭಟನಾಕಾರರು ಪೊಲೀಸರ ವಶ
ಮಂಗಳೂರು, ಅಕ್ಟೋಬರ್ 18: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ತೀವ್ರಗೊಂಡಿದ್ದು, ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಇಂದು (ಅಕ್ಟೋಬರ್ 18) ಟೋಲ್ ಗೇಟ್ಗೆ ಮುತ್ತಿಗೆ ಹಾಕಿದ್ದಾರೆ.
ಸಾಕಷ್ಟು ಬಾರಿ ಹೋರಾಟ ನಡೆಸಿದ್ದ ಹೋರಾಟಗಾರರು ಇಂದು(ಅಕ್ಟೋಬರ್ 18) ಟೋಲ್ ಗೇಟ್ ಅನ್ನು ನೇರ ಕಾರ್ಯಾಚರಣೆ ಮಾಡಿ ಕಿತ್ತೆಸೆಯಲು ಮುಂದಾಗಿದ್ದಾರೆ. ಅನುಮತಿ ಪಡೆದು ಬೆಳಗ್ಗೆಯಿಂದ ಶಾಂತಿಯುತವಾಗಿ ಹೋರಾಟ ಆರಂಭಿಸಿದ ಪ್ರತಿಭಟನಾಕಾರರು ಬಳಿಕ ಟೋಲ್ ಸಿಬ್ಬಂದಿ ಕೂರುವ ಜಾಗಕ್ಕೆ ಮುತ್ತಿಗೆ ಹಾಕಿದ್ದಾರೆ.
ಸುರತ್ಕಲ್ ಟೋಲ್ ತೆರವಿಗೆ 20 ದಿನ ಸಮಯ ಕೊಡಿ; ನಳಿನ್ ಕುಮಾರ್ ಕಟೀಲ್
ಸುರತ್ಕಲ್ ಎನ್ಐಟಿಕೆ ಟೋಲ್ ಪ್ಲಾಝಾ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಕ್ರೋಶಗೊಂಡಿರುವ ಹೋರಾಟಗಾರರು ಟೋಲ್ ಗೇಟ್ನ್ನು ನಾಶ ಮಾಡಲು ಮುಂದಾಗಿದ್ದಾರೆ. ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಟೋಲ್ ಒಳಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಮಂಗಳೂರು ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವ ಯತ್ನ ಮಾಡಿದ್ದಾರೆ. ಟೋಲ್ ಗೇಟ್ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು, ಹೋರಾಟ ನಿರತ ಅನೇಕರನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ವಿವಾದ..?
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ಗೇಟ್, ಹೆಜಮಾಡಿ ಟೋಲ್ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯಲು ಮುಹೂರ್ತ ಫಿಕ್ಸ್
ಅರುವತ್ತು ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್ಗೇಟ್ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ಹೀಗಾಗಿ ಹೋರಾಟಗಾರರೇ ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್ ಅನ್ನು ಕಿತ್ತೆಸೆಯಲು ಮುಂದಾಗಿದ್ದಾರೆ.
ಈ ಹಿಂದೆ ಸ್ಥಳೀಯ ಸಂಸದರು ಹಾಗೂ ಶಾಸಕರು ಸುರತ್ಕಲ್ ಟೋಲ್ ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡುವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದು, ಟೋಲ್ ತೆರವಿಗೆ ಯಾವುದೇ ಕ್ರಮವಾಗಿಲ್ಲ. ಈ ನಡುವೆ ಜಿಲ್ಲಾಧಿಕಾರಿ ಈಗಾಗಲೇ ಸಭೆ ನಡೆಸಿ ಈ ತಿಂಗಳ ಅಂತ್ಯಕ್ಕೆ ಈ ಟೋಲ್ ಗೇಟ್ ಅನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಟೋಲ್ ತೆರವಿಗೆ ಯಾವುದೇ ಕೆಲಸಗಳು ನಡೆಯದ ಕಾರಣ, ಹೋರಾಟಗಾರರೇ ಟೋಲ್ ತೆರವಿಗೆ ಮುಂದಾಗಿದ್ದಾರೆ.