ಬಂಟ್ವಾಳದಲ್ಲಿ ನಿಧಿಗಾಗಿ ನಾಗರ ಹುತ್ತವನ್ನೇ ಅಗೆದ ಕಳ್ಳರು!
ಬಂಟ್ವಾಳ, ಜ.8: ಅಯ್ಯೊಯ್ಯೋ... ಹಣಕ್ಕಾಗಿ ಈ ಜನ ಏನ್ ಬೇಕಾದ್ರೂ ಮಾಡ್ತಾರೆ. ನಿಧಿ ಹುಡುಕುವ ಆತುರದಲ್ಲಿ ಜನರ ಗುಂಪೊಂದು ಹುತ್ತವನ್ನೇ ಅಗೆದು ಶೋಧಿಸಿರುವುದು ಕಾವಳಪಡೂರು ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಕಾವಳಪಡೂರು ಹಾಗೂ ಮೂಡುಪಡುಕೋಡಿ ಗ್ರಾಮದ ಗಡಿಭಾಗದಲ್ಲಿರುವ ಬೇಂಗತ್ತೋಡಿ ನಾಗಬನದಲ್ಲಿ ಈ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಸಾವಿರ ವರ್ಷಗಳ ಇತಿಹಾಸವುಳ್ಳ ಈ ನಾಗಬನದಲ್ಲಿ ನೂತನ ನಾಗನಕಟ್ಟೆ ನಿರ್ಮಿಸಲು ಶಂಕುಸ್ಥಾಪನೆ ದಿನವನ್ನು ಬುಧವಾರವಷ್ಟೇ ನಿಗದಿಪಡಿಸಲಾಗಿತ್ತು. ಈ ದಿನವೇ ಅಪರಿಚಿತರು ನಿಧಿಗಾಗಿ ಶೋಧ ನಡೆಸಿದ್ದಾರೆ.
ಈ ಹಿಂದೆ ಪಟೇಲ್ ಹೌಸ್ ಎಂದು ಕರೆಯಲ್ಪಡುತ್ತಿದ್ದ ಈ ಜಮೀನು ನರಸಿಂಹಾಚಾರ್ ಎಂಬವರಿಗೆ ಸೇರಿತ್ತು. ಬಳಿಕ ಅವರು ಬೆಳ್ತಂಗಡಿಯ ಕ್ರಿಶ್ಚಿಯನ್ ಸಮುದಾಯದವರಿಗೆ ಮಾರಿ ಮೈಸೂರಿಗೆ ತೆರಳಿದ್ದರು. ಆಗ ಅನಾಥಗೊಂಡಿದ್ದ 18 ನಾಗನ ಕಲ್ಲುಗಳ ನಾಗಬನಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದರು. [ನಿಧಿಗಾಗಿ ಮಗಳ ಬಲಿಕೊಟ್ಟ ತಂದೆ]
ನಿಜವಾಗಿಯೂ ನಿಧಿಯಿತ್ತೇ? : ಎರಡು ವರ್ಷಗಳ ಹಿಂದೆ ಈ ನಾಗಬನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಥಳ ಪ್ರಶ್ನೆಯನ್ನು ಇರಿಸಲಾಗಿತ್ತು. ಈ ವೇಳೆ ನಾಗಬನದಲ್ಲಿ ನೂತನ ಕಟ್ಟೆ ನಿಮಾ೯ಣವಾಗಬೇಕು, ಈ ಬನಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ, ಹುತ್ತದಲ್ಲಿ ನಾಗನ ಸಾನ್ನಿಧ್ಯವಿದೆ, ನಿಧಿಯಿದೆ, ಪೂಜೆ ನಿರಂತರ ಇರಬೇಕು ಎಂಬ ಉತ್ತರ ಬಂದಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಸಮಿತಿ ರಚಿಸಿ ನಾಗನಕಟ್ಟೆ ಅಭಿವೃದ್ಧಿಗೆ ಮುಂದಾಗಿದ್ದರು. ಅದರಂತೆ ಬುಧವಾರ ನೂತನ ಕಟ್ಟೆ ನಿಮಾ೯ಣದ ಶಂಕುಸ್ಥಾಪನೆಗೆ ದಿನ ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗನಕಲ್ಲುಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ್ದರು. ಈ ನಡುವೆಯೇ ನಿಧಿಗಾಗಿ ಶೋಧ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಅಥವಾ ಅದಕ್ಕೂ ಮೊದಲೇ ಬಾಲಾಲಯದ ಹಿಂದಿದ್ದ ಹುತ್ತಗಳನ್ನು ಅಗೆದು ನಿಧಿಗಾಗಿ ಶೋಧ ನಡೆಸಿರುವುದು ಗೊತ್ತಾಗಿದೆ. ಶಂಕು ಸ್ಥಾಪನೆಗಾಗಿ ತಂದಿರಿಸಿದ್ದ ಹಾರೆ ಪಿಕಾಸುಗಳನ್ನು ನಿಧಿಶೋಧನೆಗೆ ಬಳಸಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಶೆಟ್ಟಿ ಅವರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯ ಪದ್ಮಶೇಖರ ಜೈನ್ ಇತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಸಮಿತಿಯವರು ಬುಧವಾರ ನಿಗದಿಯಂತೆ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.