ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ: ಶಶಿಕಾಂತ ಸೆಂಥೀಲ್
ಮಂಗಳೂರು, ಏಪ್ರಿಲ್ 04: ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನೀತಿಸಂಹಿತೆಯ ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಮತದಾನದ ದೃಢೀಕರಣಕ್ಕೆ ವಿವಿ ಪ್ಯಾಟ್ ಯಂತ್ರವನ್ನೂ ಬಳಕೆ ಮಾಡಲಾಗ್ತಿದೆ. ಮತ ಯಂತ್ರಗಳ ಬಗ್ಗೆ ಗೊಂದಲದಲ್ಲಿರುವ ಜನ ಸಾಮಾನ್ಯರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತದಾನದ ಪ್ರಾತ್ಯಕ್ಷಿಕೆ ಮತ್ತು ನೀತಿಸಂಹಿತೆ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಚುನಾವಣೆಯಲ್ಲಿ ಬಳಕೆಯಾಗುವ ಮತಯಂತ್ರಗಳ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಈ ಹಿಂದೆ ಸಂಶಯ ವ್ಯಕ್ತಪಡಿಸಿದ್ದವು. ಉತ್ತರ ಪ್ರದೇಶದ ಚುನಾವಣೆ ಬಳಿಕ ಮತಯಂತ್ರದ ಬಗ್ಗೆ ಭಾರೀ ಗೊಂದಲ ವ್ಯಕ್ತವಾಗಿತ್ತು. ಆದರೆ, ಈ ಬಾರಿ ಅಂಥ ಗೊಂದಲಕ್ಕೆ ಅಸ್ಪದವಾಗದಂತೆ ಮತದಾನದ ದೃಢೀಕರಣಕ್ಕಾಗಿಯೇ ಮತ್ತೊಂದು ಯಂತ್ರ ಬಂದಿದೆ. ಮತಯಂತ್ರಗಳಿಗೆ ವಿವಿ ಪ್ಯಾಟ್ ಅಳವಡಿಸಿ ಮತದಾರ ಸೂಚಿಸಿದ ಪಕ್ಷ ಅಥವಾ ವ್ಯಕ್ತಿಗೆ ಮತ ಬಿದ್ದಿರುವ ಬಗ್ಗೆ ಖಾತ್ರಿಗಾಗಿ ಪ್ರಿಂಟೆಡ್ ಶೀಟ್ ಪಡೆಯಬಹುದಾಗಿದೆ.
ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ಚುನಾವಣಾ ಆಯೋಗ ಕಣ್ಣು
ಮತದಾರನಿಗೆ ಏಳು ಸೆಕೆಂಡು ಕಾಲ ಡಿಸ್ಪ್ಲೇಯಲ್ಲಿ ಕಾಣಿಸುವ ಈ ಪ್ರಿಂಟೆಡ್ ಶೀಟ್ ಆ ಬಳಿಕ ಯಂತ್ರದಲ್ಲಿಯೇ ಬೀಳುತ್ತೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಯಂತ್ರವನ್ನು ಪರಿಚಯಿಸಲಾಗುತ್ತಿದ್ದು, ಈ ಬಗ್ಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾತ್ಯಕ್ಷಿಕೆ ನಡೆಲಾಗಿದೆ.
ಒಂದು ವೇಳೆ, ಸೂಚಿಸಿದ ಪಕ್ಷಕ್ಕೆ ಮತ ಬೀಳದೇ ಇದ್ದರೆ ತಕ್ಷಣದಲ್ಲಿಯೇ ಮತಗಟ್ಟೆಯ ಅಧಿಕಾರಿಗೆ ತಿಳಿಸಿ, ಮತದಾನದ ಪ್ರಕ್ರಿಯೆ ಸ್ಥಗಿತಗೊಳಿಸಲು ಅವಕಾಶವಿದೆ. ಅಲ್ಲದೆ, ಮತ ಎಣಿಕೆಯ ಸಂದರ್ಭ ಯಂತ್ರದ ಬಗ್ಗೆ ಗೊಂದಲ ಕಂಡುಬಂದಲ್ಲಿ ಈ ಯಂತ್ರದಲ್ಲಿ ಬಿದ್ದಿರುವ ಮತ ಪತ್ರಗಳ ಆಧಾರದಲ್ಲಿ ಎಣಿಕೆಯನ್ನೂ ಮಾಡಬಹುದಾಗಿದೆ.
ಇನ್ನು ಈ ಬಾರಿ ಚುನಾವಣೆಯ ಖರ್ಚು ವೆಚ್ಚದ ವಿಚಾರದಲ್ಲೂ ಆಯೋಗ ಹದ್ದಿನ ಕಣ್ಣಿಟ್ಟಿದ್ದರಿಂದ, ಕರಾವಳಿಯಲ್ಲಿ ಸಾಂಪ್ರದಾಯಿಕ ಆಚರಣೆಗಳ ನೆಪದ ಆಡಂಬರಕ್ಕೂ ಬ್ರೇಕ್ ಬಿದ್ದಿದೆ. ಯಕ್ಷಗಾನ, ನಾಟಕ, ಉತ್ಸವಗಳಂಥ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕಿದೆ.
ರಾಯಚೂರು: EVM ಪ್ರಾತ್ಯಕ್ಷಿತೆ ವೇಳೆ ಗೊಂದಲ, ಜಿಲ್ಲಾಧಿಕಾರಿಗೆ ಮನವಿ
ಅಲ್ಲದೆ, ರಾತ್ರಿ ಹತ್ತು ಗಂಟೆಯ ಬಳಿಕ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲದಿರುವುದು ಯಕ್ಷಗಾನ ಪ್ರೇಮಿಗಳ ನಿರಾಸೆಗೆ ಕಾರಣವಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶುಕಾಂತ ಸೆಂಥೀಲ್ , ಯಕ್ಷಗಾನ ಕಾರ್ಯಕ್ರಮಕ್ಕೆ ಅನುಮತಿ ಪಡೆದು ನಡೆಸಲು ಅಡ್ಡಿಯಿಲ್ಲ ಅದರೆ ಊಟದ ವಿಚಾರದಲ್ಲಿ ಮಾತ್ರ ನಿಗಾ ಇಡಬೇಕಾಗುತ್ತೆ ಎಂದಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಖಾಸಗೀ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನಾಮಪತ್ರ ಸಲ್ಲಿಕೆಯ ದಿವಸದಿಂದಲೇ ಆಯಾ ಅಭ್ಯರ್ಥಿಯ ಚುನಾವಣಾ ಖರ್ಚು ಲೆಕ್ಕಕ್ಕೆ ಬರುತ್ತೆ. ಅದಕ್ಕೂ ಮುನ್ನ ಆಯಾ ವ್ಯಕ್ತಿ ಜಾಹೀರಾತು ನೀಡಿದಲ್ಲಿ ಅದು ಕೂಡ ಚುನಾವಣಾ ವೆಚ್ಚಕ್ಕೇ ಸೇರ್ಪಡೆಯಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯನ್ನು ಹಿಂದಿಗಿಂತ ಹೆಚ್ಚು ಪಾರದರ್ಶಕವಾಗಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ ಎಂದರು.