ಕಾಡಲ್ಲಿ ಅರ್ಧ ಶತಕ ಕಳೆದ ಕೆಂಚಪ್ಪ ಇನ್ನು ನೆನಪು ಮಾತ್ರ
ನಾಡಿಗೆ ಬರದೆ ಸುಮಾರು 50ಕ್ಕೂ ಹೆಚ್ಚು ವರ್ಷದಿಂದ ಕಾಡಿನಲ್ಲಿ ಒಬ್ಬಂಟಿ ಜೀವನ ನಡೆಸಿದ್ದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಾಳೆಡಿಯ ನಿವಾಸಿ ಕೆಂಚಪ್ಪ (72) ಇನ್ನು ನೆನಪು ಮಾತ್ರ.
ವಯೋ ಸಹಜ ಕಾಯಿಲೆಯಿಂದ ಅಕ್ಟೋಬರ್ 27ರಂದು, ಶುಕ್ರವಾರ ಇವರು ತನ್ನ ಸಹೋದರನ ಮನೆಯಲ್ಲಿ ನಿಧನರಾದರು.

ಇವರ ಜೀವನವೇ ಒಂದು ರೋಚಕ ಕಥೆ. ಸುಮಾರು 25 ವರ್ಷದವರಿರುವಾಗ ಮನೆಯವರನ್ನೆಲ್ಲ ತೊರೆದು ಕಾಡಿನಲ್ಲಿ ನೆಲೆಸಲು ಶುರು ಮಾಡಿದ ಈ ವ್ಯಕ್ತಿ ಮಳೆ, ಚಳಿ, ಬಿಸಿಲು ಎನ್ನದೆ ಚಿಕ್ಕದೊಂದು ಬಿದಿರಿನ ಸೂರು ಮಾಡಿಕೊಂಡು, ಕಲ್ಲನ್ನೇ ಮಲಗಲು ಹಾಸಿಗೆಯನ್ನಾಗಿ ಮಾಡಿಕೊಂಡು ಒಬ್ಬಂಟಿಯಾಗಿ ಜೀವಿಸಲು ಆರಂಭಿಸಿದರು.
ಅಂದಿನಿಂದ ಇಂದಿನವರೆಗೆ ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸುಗಳೇ ಇವರ ಆಹಾರವಾಗಿತ್ತು. ಅದೆಷ್ಟೋ ಬಾರಿ ಕಾಡು ಪ್ರಾಣಿಗಳು ದಾಳಿ ಮಾಡಿದಾಗ ಪಕ್ಕದಲ್ಲೇ ಇದ್ದ ಮರವೇರಿ ಕೆಂಚಪ್ಪ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿದ್ದರು.
ಸಂಬಂಧಿಕರು ಇವರ ಮನಸ್ಸು ಓಲೈಕೆ ಮಾಡಿ ಮನೆಗೆ ಕರೆತರಬೇಕೆಂದು ಅವಿರತ ಪ್ರಯತ್ನ ಮಾಡಿ ವಿಫಲರಾಗಿದ್ದರು. ಯಾಕೆ ಅವರು ಕಾಡಿನಲ್ಲಿ ಒಬ್ಬಂಟಿ ಜೀವನ ಆರಂಭಿಸಿದರು ಎಂಬುದರ ಹಿಂದಿನ ನಿಗೂಢ ಸಂಗತಿ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಉತ್ತರ ಕಂಡುಕೊಳ್ಳಲು ಈಗ ಅವರೂ ಇಲ್ಲ.
ಕಾಡಲ್ಲಿಯೇ ಏಕೆ ಅವರು ವಾಸಿಸಲು ಇಚ್ಛಿಸಿದರು ಎಂಬ ಸಂಗತಿ ಮತ್ತು ಅದರ ಹಿಂದಿನ ಸತ್ಯ ಈಗ ಅವರ ಸಾವಿನೊಂದಿಗೆ ಸಮಾಧಿಯಾಗಿದೆ. ನಾಡಿಗೆ ಬರದೆ ಕಾಡನ್ನೇ ತನ್ನ ಸರ್ವಸ್ವ ಎಂದುಕೊಂಡು ಬದುಕಿದ ಕೆಂಚಪ್ಪ ಇನ್ನು ಬರೀ ನೆನಪು ಮಾತ್ರ.












Click it and Unblock the Notifications