ಮೂಡುಬಿದಿರೆ ಶಾಲೆಯ ಸೌಂದರ್ಯ ಹೆಚ್ಚಿಸಿದ ಚಿತ್ತಾರ ಕಲೆ
ಮೂಡುಬಿದಿರೆ, ಡಿಸೆಂಬರ್, 22: ಗೋಡೆಗಳಿರುವುದೇ ತೋಚಿದ್ದು ಗೀಚೋದಿಕ್ಕೆ, ಏನೇನೋ ಬೇಕಾಬಿಟ್ಟಿ ಬರೆಯೋದಿಕ್ಕೆ ಎಂಬ ಪಡ್ಡೆ ಹುಡುಗರ ಆಲೋಚನೆಯನ್ನೇ ಬದಲಾಯಿಸುವ ವಿಭಿನ್ನ ಪ್ರಯತ್ನವನ್ನು ವಿದ್ಯಾರ್ಥಿಗಳು, ಶಿಕ್ಷಕರು ಮಾಡಿದ್ದಾರೆ. ಶಾಲೆಯ ಗೋಡೆಗಳನ್ನು ಚಿತ್ತಾರಗಳಿಂದ ಅಲಂಕರಿಸಿ ತಮ್ಮಲ್ಲಿನ ಕಲೆಯನ್ನು ಅನಾವರಣಗೊಳಿಸಿ ಶಾಲೆ ಸೌಂದರ್ಯಕ್ಕೆ ಇನ್ನಷ್ಟು ಮೆರಗು ತಂದಿದ್ದಾರೆ.
ಮಂಚಿಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಅವರ ಮಾರ್ಗದರ್ಶನದಲ್ಲಿ ಮೂಡಬಿದಿರೆ ಸಮೀಪದ ಮಾಸ್ತಿಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವರ್ಣ ಸಂಭ್ರಮವನ್ನು ಆಚರಿಸಿದ ಸಂದರ್ಭದಲ್ಲಿ ಸುಂದರವಾದ ಚಿತ್ತಾರ ಮೂಡಿದೆ.[ಚಿತ್ತಾರ ಕಲಾವಿದರ ಚಾವಡಿಯಲ್ಲಿ...!]

ಎರಡರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಕಲಾ ಶಿಬಿರದಲ್ಲಿ ವಿದ್ಯಾರ್ಥಿಗಳ ಈ ಕ್ರಿಯಾಶೀಲತೆಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಲೆ ಶಿಬಿರದ ಮೂಲಕ ಸುತ್ತಮುತ್ತಲ ಪರಿಸರವನ್ನು ಸುಂದರವಾಗಿಡುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ರವಾನಿಸಲಾಯಿತು.[ನಾನಾ ವರ್ಣದಲ್ಲಿ ಕಂಗೊಳಿಸೋ ಕೃಷ್ಣನ ನೋಡಲು ಉಡುಪಿಗೆ ಬನ್ನಿ]
ಶಾಲೆ ಆವರಣದ ಗೋಡೆ ಮಾತ್ರವಲ್ಲ, ತರಗತಿ, ಶಿಕ್ಷಕರ ಕೊಠಡಿಗಳು ಕೂಡಾ ಚಿತ್ತಾರಗಳಿಂದ ನಳನಳಿಸುತ್ತಿದ್ದವು. ಕರಾವಳಿಯ ಕೃಷಿ ಪರಂಪರೆ, ಜಾನಪದ, ಶಿಕ್ಷಣ ಯೋಜನೆಗಳನ್ನು ವರ್ಣ ಚಿತ್ರಕಲೆಯ ಮೂಲಕ ನೋಡುಗರ ಗಮನ ಸೆಳೆದವು. [ಗೆರೆಗಳೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಂಡ ಕಲಾವಿದ]
ಮೂಡಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಎಂ. ಗಣೇಶ್ ಕಾಮತ್ ಭಿತ್ತಿಯಲ್ಲಿ ಆಕರ್ಷಕ ಗೆರೆಗಳನ್ನು ಎಳೆಯುವ ಮೂಲಕ ವರ್ಣ ಸಂಭ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಸಂಯೋಜಕ ದೇವದಾಸ್, ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಎನ್, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೆಲ್ವಕುಮಾರ್ ಇದಕ್ಕೆ ಸಾಕ್ಷಿಯಾಗಿದ್ದರು.












Click it and Unblock the Notifications