ಬಾಂಗ್ಲಾದವರು ನುಸುಳಿರುವ ಶಂಕೆ, ಮಂಗಳೂರಿನಲ್ಲಿ 518 ಜನರು ವಶಕ್ಕೆ
ಮಂಗಳೂರು, ಜುಲೈ 5: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಈ ರೀತಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗಾಗಿ ಶೋಧ ಕಾರ್ಯವನ್ನು ಮಾಡುತ್ತಿದ್ದಾರೆ. ಅನುಮಾನಾಸ್ಪದವಾಗಿ ಕಂಡುಬಂದ ವಲಸಿಗರನ್ನು ವಶಕ್ಕೆ ಪಡೆದು ಸುಮಾರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರ ಪೈಕಿ ಬಾಂಗ್ಲರ ಸಂಖ್ಯೆ ಹೆಚ್ಚು. ಇದರ ಜೊತೆ ಬೇರೆ ದೇಶದ ಮಂದಿಯು ಅನಧಿಕೃತವಾಗಿ ಭಾರತದಲ್ಲಿ ನೆಲೆಸಿರುವ ಸಂಶಯವು ಇದೆ. ಹೀಗಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ ಮಂಗಳೂರು ಪೊಲೀಸರು ಈ ರೀತಿ ನೆಲೆಸಿರುವ ಅಕ್ರಮ ವಲಸಿಗರ ಪತ್ತೆಗೆ ಮುಂದಾಗಿದ್ದಾರೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ವಿವಿಧ ಕಾರ್ಖಾನೆ, ಕಂಪನಿ, ಮೀನುಗಾರಿಕಾ ಬಂದರು ಸೇರಿದಂತೆ ವಿವಿಧ ಕಡೆ ಕೆಲಸಕ್ಕೆಂದು ಬಂದಿರುವ ಹೊರ ರಾಜ್ಯದ ಕಾರ್ಮಿಕರ ಸಂಪೂರ್ಣ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ಕಾರ್ಮಿಕರನ್ನು ವಿಚಾರಣೆ ನಡೆಸಲಾಗಿದ್ದು, ಇದರಲ್ಲಿ ದಾಖಲೆ ಹಾಜರುಪಡಿಸದ, ಅನುಮನಸ್ಪಾದ 518 ಮಂದಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಆಧಾರ್, ವೋಟರ್ ಐಡಿ ಸೇರಿ ವಿವಿಧ ದಾಖಲಾತಿ ಪರಿಶೀಲನೆ
ಕಮೀಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಈ ರೀತಿಯ ಕಾರ್ಮಿಕರನ್ನು ವಿಚಾರಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಕಂಡುಬಂದಿರುವ ಮಂದಿ ಬೇರೆ ಬೇರೆ ರಾಜ್ಯಗಳ ವಿಳಾಸದಲ್ಲಿ ಫೇಕ್ ಆಧಾರ್ ಕಾರ್ಡ್ ಪಡೆದು ನೆಲೆಸಿರುವ ಶಂಕೆಯಿದೆ. ಹೀಗಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಮೂಲಕ ಈ ಬಗ್ಗೆ ವೆರಿಫೀಕೇಶನ್ ಮಾಡಲಾಗುತ್ತಿದೆ. ಪ್ರತಿಯೊಬ್ಬರ ಮೊಬೈಲ್ ನಂಬರ್ನ ಸಿ.ಡಿ.ಆರ್ ತೆಗೆದು ವರ್ಷವೊಂದರಲ್ಲಿ ಮಾಡಿರುವ ಕರೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.
ಭಾರತ ಬಿಟ್ಟು ಬೇರೆ ದೇಶಕ್ಕೆ ಕರೆ ಹೋಗಿದಿಯಾ ಎಂದು ಚೆಕ್ ಮಾಡಲಾಗುತ್ತೆ. ಅವರು ಹೇಳುವ ಊರಿನ ಗೂಗಲ್ ಮ್ಯಾಪ್ ಲೋಕೇಶನ್ ತೆಗೆದು ಕ್ರಾಸ್ ವೆರಿಫಿಕೇಶನ್ ಮಾಡುತ್ತಿದ್ದಾರೆ. ಇದರ ಜೊತೆ ಬ್ಯಾಂಕ್ ವ್ಯವಹಾರದಲ್ಲಿ ಹಣ ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ? ಎಂಬ ಬಗ್ಗೆ ತನಿಖೆ ಸೇರಿದಂತೆ ಒಟ್ಟು ಇಪ್ಪತ್ತು ಆಯಾಮಗಳಲ್ಲಿ ವಿವರವಾದ ವಿಚಾರಣೆ ನಡೆಸಲಾಗುತ್ತಿದೆ.

ಪಾಸ್ಪೋರ್ಟ್, ಫಾರಿನರ್ಸ್ ಆ್ಯಕ್ಟ್ ಅಡಿ ಕಠಿಣ ಕ್ರಮ
ಮಂಗಳೂರಿನಲ್ಲಿ ಅಸ್ಸಾಂ, ಬಿಹಾರ, ಒರಿಸ್ಸಾ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಮೂಲದ ಕಾರ್ಮಿಕರು ಹೆಚ್ಚಿದ್ದಾರೆ. ಆದರೆ ಇವರೆಲ್ಲಾ ಮೂಲತ ಅದೇ ರಾಜ್ಯದವರಾ ಅಥವಾ ಫೇಕ್ ಆಧಾರ್ ಕಾರ್ಡ್ ಪಡೆದು ಪ್ರವೇಶಿಸಿದ್ದಾರಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಪಾಸ್ಪೋರ್ಟ್, ಫಾರಿನರ್ಸ್ ಆ್ಯಕ್ಟ್ ಅಡಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸ್ ಕಮೀಷನರ್ ನೀಡಿದ್ದಾರೆ.

ಮೊಬೈಲ್ ನಂಬರ್ ಟ್ರೇಸ್, ಬ್ಯಾಂಕ್ ಅಕೌಂಟ್ ಪರಿಶೀಲನೆ
ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿಗರು ಬಂದು ಸೇರಿರುವ ಮಾಹಿತಿ ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಒಂದು ವಾರದಿಂದ ಕಮಿಷನೇಟರ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಹೊರರಾಜ್ಯದ ಕಾರ್ಮಿಕರ ಪಟ್ಟಿ ಮಾಡಿದ್ದೇವೆ. ಈ ಪೈಕಿ 518 ಜನ ಅನುಮಾನಸ್ಪದವಾಗಿ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ.
ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಫೇಕ್ ಮಾಡಿರುವ ಸಾಧ್ಯತೆ ಇರುವುದರಿಂದ ಈ ಬಗ್ಗೆಯೂ ಖಾತ್ರಿ ಮಾಡುತ್ತಿದ್ದೇವೆ. ಅವರ ಫೋನ್ ನಂಬರ್ ಟ್ರೇಸ್ ಮಾಡಿ, ಭಾರತದೊಳಗೆ ಮತ್ತು ಭಾರತದಿಂದ ಹೊರಗೆ ಕಾಲ್ ಹೋದ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಬ್ಯಾಂಕ್ ಅಕೌಂಟ್ ಕೂಡಾ ಪರಿಶೀಲನೆ ಮಾಡುತ್ತೇವೆ. ಬಾಂಗ್ಲಾದೇಶದ ವ್ಯಕ್ತಿಗಳ ಜೊತೆ ಸಂಪರ್ಕ ಇದೆಯಾ ಎಂಬುವುದರ ಬಗ್ಗೆಯೂ ವಿಚಾರಣೆ ಮಾಡಿದ್ದೇವೆ ಎಂದು ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ನಾಲ್ಕು ಸಾವಿರ ಕಾರ್ಮಿಕರ ವಿಚಾರಣೆ
ಒಟ್ಟು 18 ಪ್ರತ್ಯೇಕ ಕೌಂಟರ್ ನಲ್ಲಿ ವಿಚಾರಣೆ ನಡೆಸಲಾಗಿದೆ. ಮಂಗಳೂರಿನಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಉತ್ತರ ಪ್ರದೇಶ, ತಮಿಳುನಾಡು ಮೂಲದ ಕಾರ್ಮಿಕರು ಇದ್ದಾರೆ. ಒಟ್ಟು ನಾಲ್ಕು ಸಾವಿರ ಕಾರ್ಮಿಕರ ವಿಚಾರಣೆ ಪೈಕಿ 518 ಜನ ಅನುಮಾನಾಸ್ಪದವಾಗಿ ಕಂಡುಬಂದಿದ್ದಾರೆ. ಅಕ್ರಮ ವಾಗಿ ನಲೆಸಿದ್ದರೆ ಅವರ ಮೇಲೆ ಪಾಸ್ ಪೋರ್ಟ್ ಆಕ್ಟ್ ಮತ್ತು ಫಾರಿನರ್ಸ್ ಆಕ್ಟ್ ನಡಿ ಕೇಸ್ ದಾಖಲಿಸುತ್ತೇವೆ ಅಂತಾ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.












Click it and Unblock the Notifications