ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ವಿವಾಹ, ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆ ವೈರಲ್
ಮಂಗಳೂರು, ಡಿಸೆಂಬರ್, 02: ಈಗಾಗಲೇ ಮಂಗಳೂರಿನ ಸುರತ್ಕಲ್ ಟೋಲ್ಗೇಟ್ ಅನ್ನು ಸ್ಥಗಿತಗೊಳಿಸಲಾಗಿದೆ. ವಾಹನ ಸವಾರರ ಬಳಿ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ಸುರತ್ಕಲ್ ಟೋಲ್ ಅನ್ನು ಇತ್ತೀಚೆಗಷ್ಟೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೆಜಮಾಡಿ ಟೋಲ್ ಗೇಟ್ನಲ್ಲೂ ಟೋಲ್ ಶುಲ್ಕ ಹೆಚ್ಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆಯೇ ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ಗೇಟ್ನ ಮದುವೆ ಮಾಡಿಸುವ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಲೇ ಇದೆ.
ಸುರತ್ಕಲ್ ಟೋಲ್ಗೇಟ್ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಟೋಲ್ ಸಂಗ್ರಹ ಸ್ಥಗಿತಕ್ಕೆ ಆದೇಶ ನೀಡಿದೆ. ಸದ್ಯ ಟೋಲ್ ಸ್ಥಗಿತಗೊಂಡಿದ್ದು, ಆದರೆ ಹೆಜಮಾಡಿ ಟೋಲ್ನ ಶುಲ್ಕವನ್ನು ಹೆಚ್ಚಿಸಿರುವ ನಿರ್ಧಾರ ಮಾಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಸುರತ್ಕಲ್ ಟೋಲ್ ರೀತಿಯಲ್ಲೇ ಹೆಜಮಾಡಿಯಲ್ಲಿ ವಾಹನ ಚಾಲಕರು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗಿದೆ. ಆದ್ದರಿಂದ ಹೆಜಮಾಡಿಯ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಈ ನಡುವೆಯೇ ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ಗೇಟ್ನ ಮದುವೆ ಮಾಡಿಸುವ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುರತ್ಕಲ್ ಟೋಲ್ ತೆರವಿಗೆ 20 ದಿನ ಸಮಯ ಕೊಡಿ; ನಳಿನ್ ಕುಮಾರ್ ಕಟೀಲ್
ಸದ್ದು ಮಾಡುತ್ತಿರುವ ವಿಚಿತ್ರ ಆಮಂತ್ರಣ ಪತ್ರಿಕೆ
ಇನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಈ ಶುಭ ವಿವಾಹ ಬಿಜೆಪಿ ಸರ್ಕಾರದ ಕೃಪೆಯಿಂದ ಎಂದೂ ಬರೆಯಲಾಗಿದೆ. ಪ್ರಿಯ ನಾಗರಿಕರೇ, ಡಿಸೆಂಬರ್ 01 2022 ಗುರುವಾರ ದಿವಾ ಗಂಟೆ 12ಕ್ಕೆ ಸರಿಯಾಗಿ ಸುರತ್ಕಲ್ನಲ್ಲಿ ಅಕ್ರಮವಾಗಿದ್ದ ಎನ್ಐಟಿಕೆ ಬಳಿಯ ಸುರತ್ಕಲ್ ಟೋಲ್ಗೇಟ್ ಎಂಬ ವಧುವನ್ನು ಹೆಜಮಾಡಿ ಟೋಲ್ಗೇಟ್ ಎಂಬ ವರನೊಂದಿಗೆ ಮದುವೆ ಮಾಡಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಕಾರದ ಹೆದ್ದಾರಿ ಪ್ರಾಧಿಕಾರ ಸಚಿವರಾದ ನಿತಿನ್ ಗಡ್ಕರಿ ಸಮ್ಮುಖದಲ್ಲಿ, ನಳಿನ್ಕುಮಾರ್ ಕಟೀಲು ಅವರ ಮನವಿ ಮೇರೆಗೆ ವಿವಾಹವನ್ನು ಏರ್ಪಡಿಸಲಾಗಿದೆ.
ತಾವುಗಳು ಬಂದು ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭ ಹಾರೈಸಬೇಕು ಎಂದು ವಿನಂತಿ ಮಾಡಲಾಗಿದೆ. ಉಡುಗೊರೆಯೇ ಆಶೀರ್ವಾದ ಆಗಿದ್ದು, ಶುಭ ಕೋರುವವವರು ಬಿಜೆಪಿ ಎಂಎಲ್ಎಗಳು ದಕ್ಷಿಣ ಕನ್ನಡ ಎಂದು ಬರೆಯಲಾಗಿತ್ತು. ಸದ್ಯ ಈ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರುಗಳೇ ಇದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.