ಸಂಪನ್ನವಾದ ಮಂಗಳೂರು ದಸರಾ: ವೈಭವದಲ್ಲಿ ಮಿಂದೆದ್ದ ಸಾವಿರಾರು ಜನ
ಮಂಗಳೂರು, ಅಕ್ಟೋಬರ್ 16: ಕಳೆದ ಒಂಭತ್ತು ದಿನಗಳ ಕಾಲ ವೈಭವದಿಂದ ನಡೆದ ಮಂಗಳೂರು ದಸರಾ ಸಂಪನ್ನಗೊಂಡಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಗಣಪತಿ, ನವದುರ್ಗೆಯರು ಮತ್ತು ಶಾರಾದಾ ಮಾತೆಯ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಮಂಗಳೂರು ದಸರಾ ವೈಭವದ ತೆರೆ ಕಂಡಿದೆ.
ಶುಕ್ರವಾರದಂದು ದಸರಾದ ಕೊನೆಯ ದಿನದ ಅಂಗವಾಗಿ ಕ್ಷೇತ್ರದ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಸುಮಾರು 14 ಹುಲಿ ವೇಷ ತಂಡಗಳು ಶಾರದಾ ಮಾತೆಯ ಸೇವೆಯಾನುಸಾರವಾಗಿ ಹುಲಿಕುಣಿತ ಮಾಡಿದ್ದು, ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿದೆ.
ಮೈಸೂರು ದಸರಾದ ಬಳಿಕ ರಾಜ್ಯದಲ್ಲೇ ವಿಜೃಂಭಣೆಯಿಂದ ನಡೆಯುವ ಎರಡನೇ ದಸರಾ ಎಂಬ ಖ್ಯಾತಿಗೆ ಒಳಗಾಗಿರುವ ಮಂಗಳೂರು ದಸರಾಗೆ ತೆರೆ ಬಿದ್ದಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಮಂದಸ್ಮಿತ,ವೀಣಾವಾಣೆ ಶಾರಾದಾ ಮಾತೆ ಯ ಮೂರ್ತಿಯನ್ನು ದೇವಳದ ಪುಷ್ಕರಣಿ ಯಲ್ಲಿ ವಿಸರ್ಜನೆ ಮಾಡುವ ಮೂಲಕ ಮಂಗಳೂರು ದಸರಾ ವೈಭದಿಂದ ಸಂಪನ್ನಗೊಂಡಿದೆ.
ಲಕ್ಷಾಂತರ ಜನ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ
ದಸರಾ ಕೊನೆಯ ದಿನವಾದ ವಿಜಯದಶಮಿಯಂದು ಲಕ್ಷಾಂತರ ಜನ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ನವದುರ್ಗೆಯರು ಮತ್ತು ಶಾರದಾ ಮಾತೆಯ ದರ್ಶನ ಮಾಡಿದ್ದಾರೆ. ಪ್ರತೀ ವರ್ಷ ವಿವಿಧ ಆಕರ್ಷಕ ಟ್ಯಾಬ್ಲೋ ರಾತ್ರಿ ಇಡೀ ಮಂಗಳೂರು ನಗರದಲ್ಲಿ ಸಂಚರಿಸಿ ಬೆಳಗ್ಗಿನ ವೇಳೆಗೆ ಮೂರ್ತಿಗಳು ದೇವಸ್ಥಾನದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡುವುದು ವಾಡಿಕೆಯಾಗಿತ್ತು.
ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೆರವಣಿಗೆ ಸ್ಥಗಿತಗೊಳಿಸಿ, ನವದುರ್ಗೆಯರ ಮೂರ್ತಿಯನ್ನು ದೇವಳಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಆಮೇಲೆ ವಿಸರ್ಜನೆ ಮಾಡಲಾಗುತ್ತಿದೆ.
ಮೊದಲಿಗೆ ಗಣಪತಿ ಮೂರ್ತಿಯ ವಿಸರ್ಜನೆ
ಈ ಬಾರಿಯೂ ಅದೇ ನಿಯಮವನ್ನು ಪಾಲಿಸಲಾಗಿದೆ. ಮೊದಲಿಗೆ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಗಿದೆ. ಬಳಿಕ ಕ್ರಮವಾಗಿ ನವದುರ್ಗೆಯರಾದ ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ಮೂರ್ತಿ ದೇವರ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿದೆ. ಆ ಬಳಿಕ ಶಾರದಾ ಮಾತೆಯ ಮೂರ್ತಿಯನ್ನು ದೇವಳದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡುವ ಮೂಲಕ ದಸರಾಗೆ ವೈಭವದ ತೆರೆ ಕಂಡಿದೆ.
ಹತ್ತು ದಿನಗಳ ಕಾಲ ದಸರಾ ವೈಭವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಲಕ್ಷಾಂತರ ಜನ ಸಾಕ್ಷಿಯಾಗಿದ್ದಾರೆ. ಮಾಜಿ ಕೇಂದ್ರ ಸಚಿವ, ಹಿರಿಯ ಮತ್ಸದ್ಧಿ, ಬಿ. ಜನಾರ್ದನ ಪೂಜಾರಿ ಮಂಗಳೂರು ದಸರಾದ ರೂವಾರಿಯಾಗಿದ್ದು, ಇಳಿ ವಯಸ್ಸಿನಲ್ಲೂ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದಸರಾ ಉತ್ಸವಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ಬಾರಿ ನಮ್ಮ ದಸರಾ- ನಮ್ಮ ಸುರಕ್ಷತೆ ಎಂಬ ಧ್ಯೇಯವಾಕ್ಯದಡಿ ವೈಭವದ ದಸರಾ ನಡೆದಿದೆ.
ರಾಜಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತ
ಮಂಗಳೂರು ದಸರಾ ಹಿನ್ನಲೆಯಲ್ಲಿ ಮಂಗಳೂರಿನ ರಾಜಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಸಿಂಗಾರವಾಗಿತ್ತು. ಮಂಗಳೂರು ದಸರಾದ ಪ್ರಮುಖ ಆಕರ್ಷಣೆ ವಿದ್ಯುತ್ ದೀಪಾಲಂಕಾರ. ಕಳೆದ ವರ್ಷ ಕೇವಲ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ಇಡೀ ಮಂಗಳೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ಮಂಗಳೂರು ಮಹಾನಗರ ಪಾಲಿಕೆ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದೆ.
ಮುಂದಿನ ವರ್ಷದಿಂದ ಮಂಗಳೂರು ದಸರಾಗೆ ಸರ್ಕಾರದ ಅನುದಾನ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೀಗಾಗಿ ಮುಂಬರುವ ವರ್ಷದಿಂದ ದಸರಾ ವೈಭವ ಮತ್ತಷ್ಟು ಕಳೆಗಟ್ಟಲಿದೆ.
ವಿಶ್ವವಿಖ್ಯಾತಿ ಪಡೆದಿರುವ ಮಂಗಳೂರು ದಸರಾ
ಮಂಗಳೂರು ದಸರಾದ ವಿಶೇಷತೆಯೇ ಸುಂದರವಾದ ದೇವಿ ಮೂರ್ತಿಗಳು. ಕುದ್ರೋಳಿಯ ಶಾರದಾಮಾತೆ, ಗಣಪತಿ, ನವದುರ್ಯೆಯರ ಮೂರ್ತಿಯನ್ನು ನೋಡಲೆಂದೇ ಜಿಲ್ಲೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಶಾರದೆಯ ಮಂದಸ್ಮಿತ ಮೂರ್ತಿಯನ್ನು ನೋಡುವುದಕ್ಕೆ ಸಾವಿರಾರು ಮಂದಿ ಕಾತುರದಿಂದ ಕಾಯುತ್ತಾರೆ. ಶಿವಮೊಗ್ಗದ 11 ಮಂದಿ ಕಲಾವಿದರ ತಂಡ ಈ ಮೂರ್ತಿಯನ್ನು ಮಾಡಿದ್ದು, 25 ದಿನಗಳ ಕಲಾವಿದರ ಪರಿಶ್ರಮದಿಂದ ನವದುರ್ಗೆಯರ ಸುಂದರ ಮೂರ್ತಿ ವಿರಾಜಮಾನವಾಗಿತ್ತು.
ಒಟ್ಟಿನಲ್ಲಿ ಮಾಜಿ ಕೇಂದ್ರ ಬಿ. ಜನಾರ್ದನ ಪೂಜಾರಿಯವರ ಪರಿಕಲ್ಪನೆಯ ಮಂಗಳೂರು ದಸರಾ ವಿಶ್ವವಿಖ್ಯಾತಿಯನ್ನು ಪಡೆದಿದ್ದು, ಕೊರೊನಾ ಕಾರಣದಿಂದ ಸರಳ ಹಾಗೂ ಸುಂದರವಾಗಿ ಸಂಪನ್ನವಾಗಿದೆ.