ಮಧ್ಯಾಹ್ನ 3:30ಕ್ಕೆ ಚೇತನಹಳ್ಳಿ ಎಸ್ಟೇಟ್ನಲ್ಲಿ ಸಿದ್ಧಾರ್ಥ ಅಂತ್ಯಕ್ರಿಯೆ
ಮಂಗಳೂರು, ಜುಲೈ 31: ಸಿಸಿಡಿ ಮಾಲೀಕ ಸಿದ್ಧಾರ್ಥ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3:30 ರ ನಂತರ ಮಾಡಲಾಗುತ್ತದೆ.
ಸೋಮವಾರ ಸಂಜೆ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ಧಾರ್ಥ ಅವರು ಇಂದು ಬೆಳಿಗ್ಗೆ ಮೃತ ಸ್ಥಿತಿಯಲ್ಲಿ ಮಂಗಳೂರಿನ ಹೊಯಿಗೆ ಬಜಾರ್ ಎಂಬಲ್ಲಿ ಪತ್ತೆಯಾಗಿದ್ದಾರೆ.
ಸಿದ್ಧಾರ್ಥ ಅವರ ಮೃತದೇಹವನ್ನು ಪರೀಕ್ಷೆಗಾಗಿ ವೆನ್ಲಾಕ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು 10 ಗಂಟೆ ವೇಳೆಗೆ ವೆನ್ಲಾಕ್ ನಿಂದ ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಆಂಬುಲೆನ್ಸ್ ಮುಖಾಂತರ ಸಿದ್ದಾರ್ಥ ಅವರ ಮೃತದೇಹವನ್ನು ರವಾನೆ ಮಾಡಲಾಗುತ್ತದೆ. 150 ಕಿ.ಮೀ ಹಾದಿಯನ್ನು 3 ಗಂಟೆ ಒಳಗೆ ತಲುಪುವ ವಿಶ್ವಾಸವನ್ನು ವ್ಯಕ್ತಪಡಿಸಲಾಗಿದೆ. ಬಿ.ಸಿ ರೋಡು, ಬೆಳ್ತಂಗಡಿ ಮಾರ್ಗ ಚಾರ್ಮಾಡಿ ಘಾಟ್ ಮೂಲಕ ಚಿಕ್ಕಮಗಳೂರು ತಲುಪಲಿದೆ.
ಮಧ್ಯಾಹ್ನ 1 ಗಂಟೆ ವೇಳೆಗೆ ಮೂಡಗೆರೆಯ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿ ಕೆಲ ಸಮಯ ಅಂತಿಮದರ್ಶನಕ್ಕೆ ಇಡಲಾಗುತ್ತದೆ. ಅಂತಿಮ ದರ್ಶನದ ನಂತರ ಸಿದ್ಧಾರ್ಥ ಅವರ ಚೇತನಹಳ್ಳಿ ಎಸ್ಟೇಟ್ನಲ್ಲಿ ಅಂತಿಮಕಾರ್ಯ ಮಾಡಲಾಗುತ್ತದೆ. ಅಂತಿಮಕಾರ್ಯವನ್ನು 3:30 ರ ವೇಳೆಗೆ ಮಾಡಲು ನಿಶ್ಚಯಿಸಿದ್ದು, ಸ್ವಲ್ಪ ತಡವಾಗುವ ಸಂಭವ ಇದೆ.
ಅಂತಿಮಕಾರ್ಯದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡ, ಡಿ.ಕೆ.ಶಿವಕುಮಾರ್ ಇನ್ನೂ ಹಲವು ಪ್ರಮುಖ ನಾಯಕರು, ಪ್ರಮುಖ ಉದ್ಯಮಿಗಳು, ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾಫಿ ಡೇ, ಮೈಂಡ್ ಟ್ರೀ ಉದ್ಯೋಗಿಗಳು ಭಾಗಿಯಾಗುವ ನಿರೀಕ್ಷೆ ಇದೆ.












Click it and Unblock the Notifications