ಉಜಿರೆ ಶಾಂತಿವನದಿಂದ ಗುರುವಾರ ಸಿದ್ದು ಬಿಡುಗಡೆ, ಇನ್ನು ಪಾಲಿಟಿಕ್ಸ್!
Recommended Video

ಮಂಗಳೂರು, ಜೂನ್ 27 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಜಿರೆಯ ಶಾಂತಿವನದಲ್ಲಿ ಚಿಕಿತ್ಸೆ ಪೂರೈಸಿ, ಗುರುವಾರ ಬಿಡುಗಡೆ ಆಗಲಿದ್ದಾರೆ. ಬುಧವಾರದಂದು ಈ ಬಾರಿ ದಾಖಲಾದ ಅವಧಿಯ ಕೊನೆಯ ದಿನದ ಚಿಕಿತ್ಸೆ ಪಡೆಯಲಿರುವ ಸಿದ್ದರಾಮಯ್ಯ, ಗುರುವಾರ ಬೆಳಗ್ಗೆ 10 ಗಂಟೆಗೆ ಚಿಕಿತ್ಸಾಲಯದಿಂದ ಬಿಡುಗಡೆ ಆಗಲಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಿದ್ದರು ಸಿದ್ದರಾಮಯ್ಯ. ಇದೀಗ 12 ದಿನಗಳ ಪ್ರಕೃತಿ ಚಿಕಿತ್ಸೆ ಪಡೆದ ನಂತರ ಮತ್ತೆ ಬೆಂಗಳೂರು ಕಡೆಗೆ ಪ್ರಯಾಣಿಸಲಿದ್ದಾರೆ. ಮುಂಚಿಗಿಂತ ಹೆಚ್ಚು ಚಟುವಟಿಕೆಯಿಂದ ಕಂಡುಬರುತ್ತಿರುವ ಅವರು, 3 ಕೇಜಿ ತೂಕ ಇಳಿಸಿಕೊಂಡಿದ್ದಾರೆ.
ಇನ್ನು ಮಾಜಿ ಸಚಿವ ಎಸ್.ಆಂಜನೇಯ ಅವರು ಸಿದ್ದರಾಮಯ್ಯರನ್ನು ಉಜಿರೆಯ ಪ್ರಕೃತಿ ಚಿಕಿತ್ಸಾಲಯದಲ್ಲಿ ಭೇಟಿ ಮಾಡಿದರು. ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ. ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡವು ಮಂಗಳೂರಿಗೆ ಬೆಂಬಲಿಗ ಶಾಸಕರೊಂದಿಗೆ ಬಂದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಜಾರಕಿಹೊಳಿ, ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ. ಅಂದಹಾಗೆ ಸಚಿವ ರಮೇಶ್ ಜಾರಕಿಹೊಳಿ ತಂಡದಲ್ಲಿ ಒಂಬತ್ತು ಶಾಸಕರು ಕೂಡ ಇದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್, ಬಸವ ಕಲ್ಯಾಣದ ಬಿ.ನಾರಾಯಣ, ಬಳ್ಳಾರಿ ಶಾಸಕ ನಾಗೇಂದ್ರ, ರಾಯಚೂರು ಸಂಸದ ಬಿ.ವಿ.ನಾಯಕ್, ಎಂಎಲ್ಸಿ ವಿವೇಕ್ ರಾವ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್ ಬಂದಿದ್ದಾರೆ.

ವಿಮಾನ ನಿಲ್ದಾಣ ಲಾಂಜ್ ನಲ್ಲಿ ಮಾತುಕತೆ ನಡೆಸಿದ್ದು, ಆ ನಂತರ ವಿಮಾನ ನಿಲ್ದಾಣದಿಂದ ನೇರವಾಗಿ ಧರ್ಮಸ್ಥಳದ ಶಾಂತಿವನ ಚಿಕಿತ್ಸಾಲಯಕ್ಕೆ ತೆರಳಿದೆ ರಮೇಶ್ ಜಾರಕಿಹೊಳಿ ಮತ್ತು ತಂಡ.
"ನಮ್ಮ ನಾಯಕರನ್ನು ಭೇಟಿಯಾಗಲು ಹೋಗುತ್ತಿದ್ದೇವೆ. ಆರೋಗ್ಯ ವಿಚಾರಿಸಲು ಹೋಗುತ್ತಿದ್ದೇವೆ, ವಿಶೇಷವಿಲ್ಲ. ಯಾವುದೇ ವಿಚಾರ ನಾವು ಚರ್ಚೆ ಮಾಡಲ್ಲ. ಬಜೆಟ್ ಬಗ್ಗೆ ಸಿದ್ದರಾಮಯ್ಯ ನಿರ್ಧರಿಸುತ್ತಾರೆ. ನನ್ನ ಜೊತೆ ಎಂಟು ಜನ ಬಂದಿದ್ದಾರೆ" ಎಂದ ಸಚಿವ ರಮೇಶ್ ಜಾರಕಿಹೊಳಿ.












Click it and Unblock the Notifications