ಮಂಗಳೂರು ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಶಂಕೆ: ಶರಣ್ ಪಂಪ್ವೆಲ್
ಮಂಗಳೂರು, ನವೆಂಬರ್ 20: ''ನಗರದಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣದಲ್ಲಿ ಸ್ಥಳೀಯರ ಕೈವಾಡವಿದೆ. ಈ ಕೃತ್ಯದ ಹಿಂದಿನ ಶಕ್ತಿಯನ್ನು ಹಾಗೂ ಸಂಘಟನೆಯ ಬಗ್ಗೆ ತನಿಖೆಯಾಗಲಿ'' ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಈ ಸ್ಫೋಟ ಪ್ರಕರಣವನ್ನು ವಿಹಿಂಪ ಖಂಡಿಸುತ್ತದೆ. ಈ ಆಟೋರಿಕ್ಷಾದಲ್ಲಿ ಸ್ಫೋಟದ ಮುಖೇನ ಕರಾವಳಿಯ ಜನತೆಯನ್ನು ಬೆದರಿಸುವ ತಂತ್ರ ಹೂಡಲಾಗಿದೆ. ಆದರೆ ಈ ಸವಾಲನ್ನು ಕರಾವಳಿಗರು ಎದುರಿಸಬೇಕಾಗಿದೆ. ಎಲ್ಲರೂ ಈ ಕೃತ್ಯವನ್ನು ಅರಿತು ಎಚ್ಚೆತ್ತು ಭಯೋತ್ಪಾದನೆಯ ವಿರುದ್ಧ ಹೋರಾಟಬೇಕಿದೆ ಎಂದು ಹೇಳಿದರು.
Mangaluru Blast: ಸಂಚಾರದಲ್ಲಿದ್ದ ಆಟೋದಲ್ಲಿ ಸ್ಫೋಟ ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಸಂಪೂರ್ಣ ಘಟನೆಯನ್ನು ನೋಡಿದಾಗ ಸ್ಥಳೀಯರ ಕೈವಾಡವಿಲ್ಲದೆ ಈ ಕೃತ್ಯ ನಡೆಯಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಾಂಬ್ ಸ್ಫೋಟದ ತರಬೇತಿ ನೀಡಲಾಗಿದೆ. ಅದರ ಮುಂದುವರಿದ ಭಾಗವೇ ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣ. ಆದ್ದರಿಂದ ಈ ಪ್ರಕರಣದ ಸಮಗ್ರ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಕೃತ್ಯದಲ್ಲಿದ್ದವನನ್ನು ಮಾತ್ರ ಬಂಧಿಸದೆ, ಇದರ ಹಿಂದಿರುವ ಶಕ್ತಿಗಳನ್ನು ಬಂಧಿಸಬೇಕಾಗಿದೆ. ಅಲ್ಲದೆ ಕೃತ್ಯದ ಹಿಂದಿರುವ ಸಂಘಟನೆಗಳ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಬೇಕು. ಜೊತೆಗೆ ಈ ಪ್ರಕರಣದಲ್ಲಿ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಶರಣ್ ಪಂಪ್ ವೆಲ್ ಒತ್ತಾಯಿಸಿದರು.
ಗುಪ್ತಚರ ಇಲಾಖೆ ವೈಫಲ್ಯವಾಗಿಲ್ಲ
ಮಂಗಳೂರು ನಗರದ ಗರೋಡಿ ಸಮೀಪ ನಿನ್ನೆ ಸಂಜೆ ಸಂಚಾರದಲ್ಲಿದ್ದ ಆಟೋರಿಕ್ಷಾದಲ್ಲಿ ನಡೆದಿರುವ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಯಾವುದೇ ರೀತಿಯಲ್ಲಿ ವೈಫಲ್ಯವಾಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಘಟನೆ ನಡೆದಿರುವ ಸ್ಥಳಕ್ಕೆ ಇದೀಗ ಬಂದು ಪರಿಶೀಲನೆ ನಡೆಸಿ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವೊಂದು ಘಟನೆಗಳ ಸಾಮೂಹಿಕವಾಗಿ ನಡೆಯುವುದರಿಂದ ಗುಪ್ತಚರ ಇಲಾಖೆಯ ಗಮನಕ್ಕೆ ಬರುತ್ತದೆ. ಆದರೆ ಈ ಘಟನೆಯಲ್ಲಿ ಓರ್ವ ವ್ಯಕ್ತಿಯಿಂದ ಕೃತ್ಯ ನಡೆದಿರುವಾಗ ಇದು ಗುಪ್ತಚರ ಇಲಾಖೆಯ ಗಮನಕ್ಕೆ ಬರದಂತೆ ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಿದ್ದೇವೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಲಿದೆ ಎಂದು ಹೇಳಿದರು.
ಮಂಗಳೂರು ಕರ್ನಾಟಕ - ಕೇರಳ ಗಡಿಪ್ರದೇಶವಾಗಿರುವ ಹಿನ್ನಲೆಯಲ್ಲಿ ಇಲ್ಲಿ ಈ ಹಿಂದೆಯೇ ಎನ್ಐಎ ಘಟಕ ಸ್ಥಾಪಿಸಬೇಕೆಂದು ಮನವಿ ಮಾಡಿದ್ದೆ. ಈ ಘಟನೆಯ ಬಳಿಕ ಇದೀಗ ಮತ್ತೆ ಸಚಿವರಲ್ಲಿ ಒತ್ತಾಯಿಸಿ ಎನ್ಐಎ ಘಟಕವನ್ನು ಮಂಗಳೂರಿನಲ್ಲಿ ಅನುಷ್ಠಾನ ಮಾಡುವಲ್ಲಿನೂರಕ್ಕೆ ನೂರು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.