ಬಾಹುಬಲಿ ಮಸ್ತಕಾಭಿಷೇಕ:ಗಮನಸೆಳೆದ ಶಂಕರ್ ಮಹಾದೇವನ್ ದೇಶಭಕ್ತಿ ಗೀತೆ
ಮಂಗಳೂರು, ಫೆಬ್ರವರಿ 18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ ವಿಶ್ವದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಲಾಗುತ್ತಿದೆ. ಹುತಾತ್ಮರಾದ ಯೋಧರಿಗೆ ದೇಶದೆಲ್ಲೆಡೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಪ್ರತಿಕಾರಕ್ಕಾಗಿ ಧ್ವನಿ ಗಟ್ಟಿಗೊಳ್ಳುತ್ತಿದೆ.
ಉಗ್ರರ ಪೈಶಾಚಿಕ ಕೃತ್ಯಕ್ಕೆ ಖ್ಯಾತ ಗಾಯಕ ಶಂಕರ್ ಮಹಾದೇವನ್ ಸಹ ಖಂಡನೆ ವ್ಯಕ್ತಪಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತೀಕಾರ ನಡೆಯಬೇಕು ಎಂದರು.
ಧರ್ಮಸ್ಥಳದಲ್ಲಿ ಬಾಹುಬಲಿ ಮಸ್ತಕಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಸಂಗೀತ ಕಚೇರಿ ಆರಂಭಕ್ಕೂ ಮೊದಲು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದರು. ನೆರೆದಿದ್ದ ಸಂಗೀತ ಪ್ರೇಮಿಗಳಿಗೆ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನಡೆಸುವಂತೆ ಕೋರಿಕೊಂಡರು.

ಆನಂತರ ಸೈನಿಕರ ಮನೋಬಲವನ್ನು ಹೆಚ್ಚಿಸುವಂತಹ ಲಕ್ಷ್ ಚಿತ್ರದ 'ಹಾ ಯಹೀ ರಸ್ತಾ ಹೈ ತೇರಾ ತೂನೇ ಅಬ್ ಜಾನಾ ಹೈ ಎನ್ನುವ ಹಾಡು ಹಾಡಿದರು. ನೆರೆದಿದ್ದ ಸಂಗೀತ ಪ್ರಿಯರು ಹಾಡಿಗೆ ತಲೆತೂಗಿದರಲ್ಲದೆ, ಸೈನಿಕರು ಕೂಡಲೇ ತಮ್ಮ ಮೇಲಾದ ದಾಳಿಗೆ ಪ್ರತಿದಾಳಿ ನಡೆಸಬೇಕೆಂದು ಒತ್ತಾಯಿಸಿದರು.
ಖ್ಯಾತ ಚಿತ್ರಕಲಾವಿದ ವಿಲಾಸ್ ನಾಯಕ್ ಕೂಡ ಸೈನಿಕರ ಹಾಡಿಗೆ ಚಿತ್ರ ಬಿಡಿಸುವ ಮೂಲಕ ಯೋಧರ ಬಗ್ಗೆ ತಮ್ಮ ಗೌರವವನ್ನು ಸೂಚಿಸಿದರು. ಹಿಂದಿ ಚಿತ್ರಗೀತೆಗಳ ಜೊತೆಗೆ ಕನ್ನಡದ ಪ್ರಸಿದ್ಧ ಹಾಡುಗಳು ಸಾವಿರಾರು ಸಂಗೀತಪ್ರಿಯರನ್ನು ಮೋಡಿ ಮಾಡಿತು.











Click it and Unblock the Notifications