ಬೆಳ್ತಂಗಡಿ: ಎಚ್1 ಏನ್1 ಮಹಾಮಾರಿಗೆ ಮಹಿಳೆ ಬಲಿ
ಮಂಗಳೂರು, ಜುಲೈ 31 : ಇಲ್ಲಿನ ಬೆಳ್ತಂಗಡಿ ತಾಲೂಕಿನ ವೇಣೂರ್ ಗ್ರಾಮ ಪಂಚಾಯಿತಿ ಮಹಿಳಾ ಸಿಬ್ಬಂದಿಯೊಬ್ಬರು ಎಚ್1 ಏನ್1 ಮಹಾಮಾರಿ ಜ್ವರದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ವೇಣೂರ್ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಬೆಳ್ತಂಗಡಿ ನಿವಾಸಿ ಬಿ ಪುಷ್ಪಾವತಿ ಎನ್ನುವರು ಎಚ್1 ಏನ್1 ರೋಗ ಬಾಧೆಯಿಂದ ಸಾವನ್ನಪ್ಪಿದ್ದಾರೆ.

ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದ ಇವರಿಗೆ ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್1ಏನ್1 ಜ್ವರ ಇರುವುದು ಪತ್ತೆಯಾಗಿದೆ. ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಜುಲೈ 21 ರಂದು ತುರ್ತು ಚಿಕಿತ್ಸೆಗೆ ಒಳಪಡಿಸಿ ಮಗುವನ್ನು ಹೊರತೆಗೆಯಲಾಗಿತ್ತು. ಮಗು ಆರೋಗ್ಯವಾಗಿದೆ. ಆದರೆ, ಪುಷ್ಪಾವತಿಯವರು ಸಾವು ಬದುಕಿನ ಮಧ್ಯೆ ಹೋರಾಡಿ ಸುಮಾರು ಹತ್ತು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ಇದು ಜಿಲ್ಲೆಯಲ್ಲಿ ಎಚ್1ಏನ್1 ಕಾಯಿಲೆಗೆ ಬಲಿಯಾದ 2ನೇ ಪ್ರಕರಣವಾಗಿದೆ.












Click it and Unblock the Notifications