ಎಡಪಂಥೀಯ ಚಿಂತನೆ ಪ್ರವೃತ್ತಿ ದೇಶಕ್ಕೆ ಗಂಡಾಂತರ: ಸಾಹಿತಿ ಭೈರಪ್ಪ
ಮಂಗಳೂರು, ನವೆಂಬರ್. 04: ನಗರ ಪ್ರದೇಶದಲ್ಲಿ ಕಂಡುಬರುವ ಎಡಪಂಥೀಯ ಚಿಂತನೆ ಪ್ರವೃತ್ತಿ ನಾಶಮಾಡದಿದ್ದರೆ ಅದು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ಗಂಡಾಂತರವಾಗಬಲ್ಲದು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಆತಂಕ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಆರಂಭವಾದ 2 ದಿನಗಳ 'ಮಂಗಳೂರು ಲಿಟ್ ಫೆಸ್ಟ್ 2018' ಸಾಹಿತ್ಯ ಉತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಲೆಫ್ಟಿಸ್ಟ್ ಪ್ರವೃತ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಬೇಕಾ? ಒಂದು ವೇಳೆ ಲೆಫ್ಟಿಸ್ಟ್ ಸಿದ್ಧಾಂತ ಈ ಜಿಲ್ಲೆಗೆ ಬಂದರೆ ಜಿಲ್ಲೆಯ ಅಸ್ಥಿತ್ವ ನಾಶವಾಗಲಿದೆ ಎಂದರು.
ನಗರ ನಕ್ಸಲ್ ಸಮಸ್ಯೆ ಬಗ್ಗೆ ಹೆಸರೆತ್ತದೆ ಮಾತನಾಡಿದ ಭೈರಪ್ಪ ಅವರು ಮೋದಿ ಏನೂ ಮಾಡಿದರೂ ತಪ್ಪು ಎನ್ನುವ ಕಾಲಘಟ್ಟ ಈಗಿದೆ. ಅವರು ಏನೇ ಮಾಡಿದರು ವಿರೋಧ ಪಕ್ಷಗಳ ನಾಯಕರಿಗೆ ಬಯ್ಯೋದೆ ಒಂದು ಚಟ ಆಗಿ ಬಿಟ್ಟಿದೆ.
ಸಾಂಸ್ಕೃತಿಕ ಭಾರತ ನೋಡದೆ ಸಾಹಿತ್ಯ ರಚನೆ ಸಾಧ್ಯವಿಲ್ಲ. ಸಾಂಸ್ಕೃತಿಕ ಭಾರತವನ್ನು ಅರಿಯದೆ ಬರೆದ ಸಾಹಿತ್ಯ ಭಾರತದ ಬರಹ ಆಗಲಾರದು. ಇತ್ತೀಚಿನ ನವ್ಯ ಸಾಹಿತಿಗಳು ರಚಿಸುವ ಸಾಹಿತ್ಯ ತಮಿಳುನಾಡಿನ ಡಿಎಂಕೆ ಮಾನಸಿಕತೆ ಬಿಂಬಿಸುತ್ತಿವೆ. ಇಂದು ಡಿಎಂಕೆ ಮಾನಸಿಕತೆಯ ಸಾಹಿತಿಗಳು ಇದ್ದಾರೆ ಎಂದು ಛೇಡಿಸಿದರು. ಮುಂದೆ ಓದಿ...

ಶಾಸ್ತ್ರಗಳು ಒಂದೇ ರೀತಿಯಲ್ಲಿವೆ
ಪ್ರಸಕ್ತ ಕನ್ನಡ ಸಾಹಿತ್ಯದ ಒಳಗಿನ ಪ್ರವೃತ್ತಿ ನೋಡಿದರೆ ಅವರಿಗೆ ಹಿಂದಿ, ಸಂಸ್ಕೃತ ಬೇಕಾಗಿಲ್ಲ. ಕೇವಲ ತಮ್ಮ ಪ್ರದೇಶದ ಜೀವನ ಚಿತ್ರಿಸಿದರೆ ಸಾಕು ಎಂಬ ಭಾವನೆ ಈಗಿನ ಕೆಲವು ಸಾಹಿತಿಗಳಲ್ಲಿ ಇದೆ. ಇಂತಹ ಭಾವನೆ ಇಟ್ಟುಕೊಂಡು ಸಾಹಿತ್ಯ ರಚಿಸಲು ಸಾಧ್ಯವಿಲ್ಲ.
ಭಾರತದ ಎಲ್ಲಾ ಹಳ್ಳಿಗಳು ಒಂದೇ ತರಹದಲ್ಲಿವೆ. ರೀತಿ ನೀತಿ ರಿವಾಜುಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಎಲ್ಲಾ ಒಂದೇ ತರಹದಲ್ಲಿವೆ. ಆದರೆ ದೇಶದಲ್ಲಿರುವ ಆಚಾರ-ವಿಚಾರ ಶಾಸ್ತ್ರಗಳು ಒಂದೇ ರೀತಿಯಲ್ಲಿವೆ. ಅವುಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಮೂಲ ಒಂದೇ ಆಗಿದೆ ಎಂದು ಭೈರಪ್ಪ ತಿಳಿಸಿದರು.

ತತ್ವಶಾಸ್ತ್ರದ ಅಧ್ಯಯನ ಅವಶ್ಯಕ
ಸೃಜನಶೀಲ ಸಾಹಿತಿ ಎಂದಿಗೂ ವಿಮರ್ಶಕನಾಗಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಇದೊಂದು ಚಟವಾಗಿ ಬೆಳೆದು ಬಿಟ್ಟಿದೆ ಎಂದು ಹೇಳಿದ ಭೈರಪ್ಪನವರು ಇಂದಿನ ಬರಹಗಾರರಿಗೆ ತತ್ವಶಾಸ್ತ್ರದ ಅಧ್ಯಯನ ಬೇಕಾಗಿಲ್ಲ. ಆದರೆ ಬರವಣಿಗೆಯಲ್ಲಿ ತೂಕ ಬರಬೇಕಾದರೆ ತತ್ವಶಾಸ್ತ್ರದ ಅಧ್ಯಯನ ಆತ್ಯಂತ ಅವಶ್ಯಕ. ತತ್ವ ಶಾಸ್ತ್ರದ ಅಧ್ಯಯನ ನಮ್ಮ ಸಂಸ್ಕೃತಿಯ ಮೂಲ ಬೇರನ್ನು ಅರಿಯಲು ಸಹಕಾರಿಯಾಗುತ್ತದೆ ಎಂದರು.

ಸಮಗ್ರ ಭಾರತದ ಕಲ್ಪನೆ ಕಾಣಬಹುದು
ತತ್ವಶಾಸ್ತ್ರ ಅಧ್ಯಯನ ಮಾಡಿದರೆ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬಹುದು. ಹಿಂದಿನ ಕವಿಗಳು, ನವೋದಯ ಸಾಹಿತಿಗಳು ತತ್ವಶಾಸ್ತ್ರ ಅಧ್ಯಯನ ಮಾಡಿದ್ದರಿಂದಲೇ ಮೇರು ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ. ನನ್ನ ಕಾದಂಬರಿಗಳಲ್ಲಿ ಸಮಗ್ರ ಭಾರತದ ಕಲ್ಪನೆಯನ್ನು ಕಾಣಬಹುದು. ಕೇವಲ ಪ್ರವಾಸ ಮಾಡಿದರೆ ಸಾಲದು, ದೇಶದ ಜನಜೀವನವನ್ನು ಅರ್ಥೈಸಿಕೊಂಡು ಬರವಣಿಗೆ ಮಾಡಬೇಕು ಎಂದು ಡಾ.ಭೈರಪ್ಪ ಹೇಳಿದರು.

ಭಾರತದ ಸಂಸ್ಕೃತಿ ಬೆಳೆಸಿಕೊಂಡು ಹೋಗುತ್ತಿದೆ
ಕಲ್ಲಡ್ಕ ಶಾಲೆಯ ಅನುದಾನ ಕಡಿತ ವಿಚಾರ ಪ್ರಸ್ತಾಪಿಸಿದ ಭೈರಪ್ಪನವರು ಕಲ್ಲಡ್ಕ ಶ್ರೀರಾಮ ಶಾಲೆ ಭಾರತದ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುತ್ತಿದೆ. ಆದರೆ ಅಂದಿನ ಸಿಎಂ ನಿರ್ದೇಶನದಂತೆ ಮುಜರಾಯಿ ಇಲಾಖೆಯ ಅನ್ನ ಈ ಶಾಲಾ ಮಕ್ಕಳಿಗ್ಯಾಕೆ ಕೊಡಬೇಕೆಂದು ನಿಲ್ಲಿಸಿತ್ತು ಎಂದು ವಿಷಾದವ್ಯಕ್ತಪಡಿಸಿದರು. ಪ್ರಶಸ್ತಿಪ್ರದಾನದಲ್ಲಿ ಸ್ವೀಕರಿಸಿದ ಚೆಕ್ನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ದೇಣಿಗೆಯಾಗಿ ನೀಡುವುದಾಗಿ ಭೈರಪ್ಪ ತಿಳಿಸಿದರು.












Click it and Unblock the Notifications