ಕಲ್ಲಡ್ಕ ಭಟ್ ರಿಗೆ ದೇಶದ ಸಂಸ್ಕೃತಿ ಗೊತ್ತಿಲ್ಲ: ಯು.ಟಿ ಖಾದರ್ ಕಿಡಿ
ಮಂಗಳೂರು, ಏಪ್ರಿಲ್ 10: ಸಚಿವ ಯು.ಟಿ ಖಾದರ್ ಪ್ರವೇಶಿಸಿದ ದೇವಾಲಯ ಹಾಗೂ ದೈವಸ್ಥಾನಗಳಲ್ಲಿ ಇನ್ನೊಮ್ಮೆ ಬ್ರಹ್ಮಕಲಶ ನಡೆಸಬೇಕು ಎಂದು ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ನೀಡಿದ್ದ ಹೇಳಿಕೆ ಕುರಿತು ಭಾರೀ ಚರ್ಚೆ ಅರಂಭವಾಗಿದೆ. ತಮ್ಮ ವಿರುದ್ಧ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಯು.ಟಿ ಖಾದರ್ ದೇಶದ ಸಂಸ್ಕೃತಿ ಗೊತ್ತಿಲ್ಲದವರು ಮಾತ್ರ ಇಂಥ ಹೇಳಿಕೆ ನೀಡುತ್ತಾರೆ ಎಂದು ಪ್ರಭಾಕರ ಭಟ್ ಅವರನ್ನುಕುಟುಕಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕರಾವಳಿ ಬಹು ಸಂಸ್ಕೃತಿ ಮೈಗೂಡಿಕೊಂಡಿರುವ ಪ್ರದೇಶ. ಇಲ್ಲಿ ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಇದ್ದಾರೆ. ನಾನು ಬಾಲ್ಯದಿಂದಲೂ ಇತರ ಧರ್ಮಗಳನ್ನು , ಅವರ ಆಚರಣೆಗಳನ್ನು ಗೌರವಿಸುತ್ತಾ ಅದರಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ ಎಂದು ತಿಳಿಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರು ನನ್ನ ವಿರುದ್ಧ ನೀಡಿರುವ ಹೇಳಿಕೆ ಬಳಿಕ, "ಧಾರ್ಮಿಕ ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಹೆಚ್ಚಾಗಿದೆ. ದೂರವಾಣಿ ಕರೆ ಮಾಡಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದಾರೆ," ಎಂದು ಹೇಳಿದರು. ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಹೇಳಿಕೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಯಾರು ಏನೇ ಹೇಳಿದರೂ ಕ್ಷೇತ್ರದ ಜನತೆ, ಸಮಾಜದ ಮುಖಂಡರು ಆ ಬಗ್ಗೆ ನಿರ್ಧರಿಸುತ್ತಾರೆ . ಇಂತಹ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಶೋಭೆ ತರುವಂತಹದಲ್ಲ ಎಂದು ಹೇಳಿದ ಅವರು ದೇಶದ ಸಂಸ್ಕೃತಿ ಬಗ್ಗೆ ಜ್ಞಾನ ಇಲ್ಲದವರು ಮಾತ್ರ ಇಂತಹ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಧಾರ್ಮಿಕ ಮುಖಂಡರಿಗೆ ಹಾಗು ಧಾರ್ಮಿಕ ಸಂಘ ಸಂಸ್ಥೆಗಳ ಮುಖಂಡರಿಗೆ ಚುನಾವಣೆಯ ನೀತಿ ಸಂಹಿತೆಯ ಬಗ್ಗೆ ಹಲವಾರು ಗೊಂದಲಗಳಿವೆ ಈ ಹಿನ್ನೆಲೆಯಲ್ಲಿ ಚುನಾವಣಾ ಆಧಿಕಾರಿಗಳು ಅವರಿಗೊಂದು ಮಾಹಿತಿ ಕಾರ್ಯಾಗಾರ ಏರ್ಪಡಿಸಬೇಕು ಎಂದು ಅವರು ಹೇಳಿದರು.












Click it and Unblock the Notifications