ಕಾಂತಾರಾ: ದೈವಾರಾಧನೆಗೆ ಚ್ಯುತಿ ಬರದಂತೆ ದೈವನರ್ತಕನ ಸಹಾಯ ಪಡೆದಿದ್ದ ರಿಷಬ್ ಶೆಟ್ಟಿ
ಮಂಗಳೂರು, ಅಕ್ಟೋಬರ್ 6: ಕಾಂತಾರ ಚಿತ್ರ ಅದ್ಭುತ ಯಶಸ್ಸಿನ ಹಾದಿ ಮುಂದುವರಿಸಿದೆ. ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ಚಿತ್ರ ದೈವಾರಾಧಕರ ಮನಸ್ಸನ್ನು ಗೆದ್ದರೆ, ದೈವಾರಾಧನೆಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ಚಿತ್ರ ಮೂಡಿಬಂದಿದೆ.
ದೈವಾರಾಧನೆಯೇ ಮೇಳೈಸುವಂತೆ ಮಾಡಲು ಇಡೀ ಚಿತ್ರ ತಂಡ ಚಿತ್ರೀಕರಣ ಪ್ರತೀ ಹಂತದಲ್ಲೂ ತುಳುನಾಡಿನ ಪ್ರಸಿದ್ಧ ದೈವನರ್ತಕ ಮುಖೇಶ್ ಎಂಬುವವರ ನೆರವನ್ನು ಪಡೆದಿದೆ. ಚಿತ್ರೀಕರಣ ಸಂದರ್ಭದಲ್ಲಿ ದೈವವೇ ಚಿತ್ರತಂಡಕ್ಕೆ ಬೆನ್ನುಲುಬಾಗಿ ನಿಂತಿತ್ತು ಎಂಬ ವಿಚಾರವನ್ನು ಮುಖೇಶ್ ಮಾಧ್ಯಮಗಳೊಂದಿಗೆ ತೆರೆದಿಟ್ಟಿದ್ದಾರೆ.
ಮೊದಲು ರಿಷಬ್ ಶೆಟ್ಟಿ ಈ ಚಿತ್ರದ ಕಥೆಯ ತಿರುಳನ್ನು ಹೇಳಿದಾಗ ತುಂಬಾ ಯೋಚನೆ ಮಾಡಿದೆ. ಬಹಳ ಸೂಕ್ಷ್ಮ ವಿಚಾರ ಆಗಿರುವ ಕಾರಣಕ್ಕೆ ಯೋಚನೆ ಮಾಡಿದ್ದೇನೆ. ರಿಷಬ್ ಕಥೆ ಹೇಳುವಾಗ ಆ ಕಥೆ ಆತ್ಮಕ್ಕೆ ಮುಟ್ಟಿತ್ತು. ಕಥೆಯಲ್ಲಿ ಬೇಡದ ವಿಚಾರ ಇರಲಿಲ್ಲ. ಸಮಾಜಕ್ಕೆ ಒಳ್ಳೆಯ ಚಿಂತನೆಯ ಕಥೆ ಇದೆ. ರಿಷಬ್ ಶೆಟ್ಟಿ ಕಥೆ ಬರೆದಿರೋದಲ್ಲ, ದೈವವೇ ಕಥೆ ಬರೆಸಿದೆ ಅಂತಾ ದೈವನರ್ತಕ ಮುಖೇಶ್ ಹೇಳಿದ್ದಾರೆ.

ದೈವದ ಸೆಟ್ನಲ್ಲಿ ಪಾಸಿಟಿವ್ ಶಕ್ತಿ
ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರೂ ಶ್ರದ್ಧೆ ಭಕ್ತಿ ಯಿಂದ ಚಿತ್ರೀಕರಣ ಮಾಡಿದ್ದಾರೆ. ದೈವದ ಸೆಟ್ ಹಾಕಿದಾಗಲೂ ಯಾರೂ ಚಪ್ಪಲಿ ಹಾಕುತ್ತಿರಲಿಲ್ಲ. ಆದರೆ ಸೆಟ್ ಸುತ್ತಾ ನಾಗಸಾನಿಧ್ಯ, ಬಬ್ಬರಿಯಾ ದೈವದ ಸಾನಿಧ್ಯ ಇತ್ತು. ಆ ಜಾಗದಲ್ಲಿ ಪಾಸಿಟಿವ್ ಶಕ್ತಿ ಇತ್ತು. ಚಿತ್ರೀಕರಣ ಜಾಗದಲ್ಲಿ ಹಾವು ಕಾಣಿಸಿಕೊಂಡರೂ ಯಾವುದೇ ತೊಂದರೆಯಾಗಿಲ್ಲ. ಬೆಂಕಿ ಬಿದ್ದರೂ ಯಾವ ಅಪಾಯವೂ ಆಗಿಲ್ಲ. ಎಲ್ಲವೂ ಕಾರ್ಣಿಕದ ಮೂಲಕ ದೈವ ತನ್ನಿರುವಿಕೆಯನ್ನು ತೋರಿಸಿದೆ ಎಂದು ಮುಖೇಶ್ ಹೇಳಿದ್ದಾರೆ.

ಹಣಕ್ಕಾಗಿ ಚಿತ್ರ ಮಾಡಿಲ್ಲ
ಚಿತ್ರದಲ್ಲಿ ಎಲ್ಲವನ್ನೂ ದೈವವೇ ಮಾಡಿಕೊಂಡು ಹೋಗಿದೆ. ನಾನು ದೈವ ನರ್ತನ ಸೇವೆ ಮಾಡುವಾಗ ಹೇಗೆ ಕಾಣಿಸುತ್ತಿದ್ದೆಯೋ ಹಾಗೆಯೇ ಸ್ಕ್ರೀನ್ ನಲ್ಲಿ ರಿಷಬ್, ಸೌರಜ್ ಕಾಣಿಸುತ್ತಿದ್ದರು. ಕಾಂತಾರ ಚಿತ್ರ ಪಂಜುರ್ಲಿ ಮಹಿಮೆಯನ್ನು ಜಗತ್ತಿಗೆ ತೋರಿಸಿದೆ. ಈ ಚಿತ್ರವನ್ನು ನಾವು ಹಣಕ್ಕಾಗಿ ಚಿತ್ರ ಮಾಡಿಲ್ಲ, ಭಯ ಭಕ್ತಿಯಿಂದ ಮಾಡಿದ್ದೇವೆ. ಚಿತ್ರೀಕರಣದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಪತ್ನಿ ಗರ್ಭಿಣಿಯಾದರೂ ಅವರೂ ಭಯಭಕ್ತಿಯಿಂದ ಇದ್ದರು ಎಂದೂ ಮುಖೇಶ್ ಹೇಳಿದ್ದಾರೆ.

ದೈವದ ಕೂಗು ಅನುಕರಣೆ ಬೇಡ
ಸಿನಿಮಾದಲ್ಲಿ ನನ್ನ ಪಾತ್ರ ದೈವಾ ವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗವಾಗಿದ್ದು, ಅದು ನಂಬಿಕೆಯ ಸಂಗತಿ ಆಗಿದೆ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕುವುದನ್ನು ಅನುಕರಣೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಸಿನಿಮಾ ಹೌಸ್ ಫುಲ್ ಪ್ರದರ್ಶನ
ಕಾಂತಾರ ಕರ್ನಾಟಕದಲ್ಲಿ ಮಾತ್ರವಲ್ಲದೆ ಕರ್ನಾಟಕ ಹೊರತುಪಡಿಸಿ ಸಿನಿಮಾಗಳು ಹೌಸ್ ಫುಲ್ ಆಗಿ ಪ್ರದರ್ಶನ ಆಗುವುದು, ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗುವುದು ಕನಸಿನ ಮಾತಾಗಿದೆ. ಆದರೆ ಕಾಂತಾರ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಂಡಿದ್ದು, ಜನರು ಟಿಕೆಟ್ಗಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಿರುವುದು ಸಂತೋಷದ ವಿಚಾರ. ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯಿಂದ ಕೂಡಿದೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇವೆ. ಒಟ್ಟಿನಲ್ಲಿ ನಾವು ಈ ಸಿನಿಮಾ ಮಾಡಿದ್ದೇವೆ ಅನ್ನುವುದಕ್ಕಿಂತ, ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ ಎನ್ನುವುದೇ ಸೂಕ್ತ ಎಂದು ರಿಷಬ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications