ಖಾದರ್ ಹೇಳಿಕೆಯಿಂದ ಗಲಭೆ ಹೆಚ್ಚಾಯಿತು: ಸದಾನಂದಗೌಡ
Recommended Video
ಮಂಗಳೂರು, ಡಿಸೆಂಬರ್ 20: ದಕ್ಷಿಣ ಕನ್ನಡ ಶಾಂತಿಯುತವಾಗಿತ್ತು, ಯು.ಟಿ.ಖಾದರ್ ಅವರ ಬೆಂಕಿ ಹಚ್ಚುವ ಹೇಳಿಕೆಯಿಂದ ಮಂಗಳೂರು ಗಲಭೆ ಉಂಟಾಗಲು ಕಾರಣವಾಗಿದೆ ಎಂದು ಕೇಂದ್ರ ಡಿ.ವಿ.ಸದಾನಂದಗೌಡ ಹೇಳಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಂಗಳೂರಿಗೆ ಕೇರಳದಿಂದ ಬಂದ ಪ್ರತಿಭಟನಾಕಾರರ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಯು.ಟಿ.ಖಾದರ್ ಅವರು ತಮ್ಮ ಅಸ್ತಿತ್ವಕ್ಕಾಗಿ ಇಂತವರನ್ನು ಸಣ್ಣ ಪುಟ್ಟ ಗಲಾಟೆಯಾದರೂ ಕರೆಸಿಕೊಳ್ಳುತ್ತಾರೆ ಎಂದರು.
ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್ ನವರಿಗಿದೆ, ಬೇರೆಡೆಯಿಂದ ಜನರು ಬಂದಿದ್ದರಿಂದಲೇ ಇಂತಹ ದೊಡ್ಡ ಗಲಾಟೆಯಾಗಿದೆ. ತಪ್ಪು ಸಂದೇಶದಿಂದ ಆಸ್ಸಾಮ್ ನಲ್ಲಿ ಗಲಭೆ ಆರಂಭವಾಯಿತು. ಇಲ್ಲಿಯೂ ಕೂಡಾ ತಪ್ಪು ಸಂದೇಶದಿಂದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗಲು ಇದು ಸಕಾಲವಲ್ಲ. ಸಿದ್ದರಾಮಯ್ಯ, ಜಮೀರ್ ಅಹಮದ್ ಮತ್ತು ಇತರರು ಅಲ್ಲಿಗೆ ಹೋಗುವ ಮೂಲಕ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು ಎಂದು ಹೇಳಿದರು.
ಹೊರಗಿನಿಂದ ಬರುವ ನಾಯಕರಿಗೆ ಮಂಗಳೂರು ಪ್ರವೇಶ ನಿರಾಕರಿಸಿ ಎಂದು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮೂರು ಇಸ್ಲಾಮಿಕ್ ರಾಷ್ಟ್ರಗಳು, ಆದರೆ ಭಾರತ ಮಾತ್ರ ಸರ್ವ ಧರ್ಮಗಳ ರಾಷ್ಟ್ರವಾಗಿದೆ ಎಂದು ತಿಳಿಸಿದರು.
1971 ರ ಯುದ್ದದ ಬಳಿಕ ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮ ನಡೆದುಹೋಯಿತು, ಅನೇಕ ಹಿಂದೂಗಳು ನಿರಾಶ್ರಿತರಾದರು ಭಾರತ ಅಂತವರಿಗೆ ಆಶ್ರಯ ನೀಡುತ್ತಿದೆ ಎಂದರು.
ಪೌರತ್ವ ಕಾಯ್ದೆಯಡಿ ಯಾವೊಬ್ಬ ಮುಸಲ್ಮಾನ್ ಸೇರಿದಂತೆ ಯಾವ ಧರ್ಮದವರಿಗೂ ತೊಂದರೆಯಾಗಲ್ಲ, ಇದು ಯಾವುದೇ ಜಾತಿ, ಮತಕ್ಕೆ ಸೀಮಿತವಾಗಿಲ್ಲ, ಇದೊಂದು ಮಾನವೀಯತೆಯ ತಿದ್ದುಪಡಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ಆಸ್ಪತ್ರೆಗೆ ಸೇರಿರುವ ಬಗ್ಗೆ ಮಾತನಾಡಿದ ಸಚಿವರು, ಎಲ್ಲ ಧರ್ಮದ ಜನರನ್ನು ಸಮಾನವಾಗಿ ಕಾಣುವ ಶ್ರೀಗಳ ಆರೋಗ್ಯ ಬೇಗ ಸುಧಾರಿಸಲಿ ಅವರಿಂದ ಇನ್ನಷ್ಟು ಧಾರ್ಮಿಕ ಕಾರ್ಯಗಳು ನಡೆಯುವಂತಾಗಲಿ ಎಂದು ಆಶೀಸಿದರು.












Click it and Unblock the Notifications