ಪುತ್ತೂರಿನ ಹಿಂದೂ ಹೃದಯ ಸಂಗಮ ಶೋಭಾಯಾತ್ರೆ ಚಿತ್ರಗಳು
ಮಂಗಳೂರು, ಜ. 17 : ಶುಕ್ರವಾರ ಪುತ್ತೂರು ಕೇಸರಿಮಯವಾಗಿತ್ತು. ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ವಿರಾಟ್ ಹಿಂದೂ ಹೃದಯ ಸಂಗಮ ನಿಮಿತ್ತ ನಡೆದ ಭವ್ಯ ಶೋಭಾಯಾತ್ರೆಗೆ ಸಾವಿರಾರು ಜನರು ಸಾಕ್ಷಿಯಾದರು.

ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ವೇಣೂರು, ವಿಟ್ಲ, ಕಡಬ ಪ್ರಖಂಡಗಳಿಂದ ಬಂದಿದ್ದ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕೇಸರಿ ಶಾಲುಗಳನ್ನು ಧರಿಸಿದ್ದ ಕಾರ್ಯಕರ್ತರು ದರ್ಭೆ ಮತ್ತು ಬೊಳುವಾರುಗಳಲ್ಲಿ ಜಮಾಯಿಸಿದ್ದರು. ಮಧ್ಯಾಹ್ನ 2.15ಕ್ಕೆ ಆರಂಭಗೊಂಡ ಮೆರವಣಿಗೆ ಸೇರಿದ ಕಾರ್ಯಕರ್ತರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೈದಾನವನ್ನು ತಲುಪಿದರು.

ಚೆಂಡೆ, ಮದ್ದಳೆ, ತಾಸೆ, ಜಾಗಟೆ, ಶಂಖ ನಾದಗಳು ಬೃಹತ್ ಶೋಭಾಯಾತ್ರೆಯ ರಂಗನ್ನು ಹೆಚ್ಚಿಸಿದವು. ಭಾರತ ಮಾತೆ, ವಿವೇಕಾನಂದರ ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು. ಮೆರವಣಿಗೆಯಲ್ಲಿ ಸಾಗುವವರಿಗೆ ಪಾನಕ, ಶರಬತ್ತು ಮತ್ತು ಮಜ್ಜಿಗೆ ವಿತರಿಸಲಾಯಿತು. ಒಟ್ಟು 20 ಸಾವಿರ ಲೀಟರ್ ಪಾನೀಯ ವಿತರಣೆ ಮಾಡಲಾಯಿತು.

ಬೃಹತ್ ಹಿಂದೂ ಹೃದಯ ಸಂಗಮದಲ್ಲಿ ಪಾಲ್ಗೊಂಡಿದ್ದ ಡಾ. ಪ್ರವೀಣ್ ಭಾಯ್ ತೊಗಾಡಿಯಾ ಅವರು ಭರ್ತಿ ಒಂದು ಗಂಟೆ ಭಾಷಣ ಮಾಡಿದರು. ವಂದೇ ಮಾತರಂನೊಂದಿಗೆ ಸಭೆ ಆರಂಭವಾದರೆ, 13 ಬಾರಿ ರಾಮತಾರಕ ಮಂತ್ರ ಪಠಿಸಲಾಯಿತು.

ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಯ ಹಾದಿಯಲ್ಲಿ ಮತ್ತು ಸಮಾವೇಶದ ಮೈದಾನದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. 500 ಕಾರ್ಯಕರ್ತರು, 1700 ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಮಧ್ಯಾಹ್ನದ ವೇಳೆಗೆ ಪುತ್ತೂರು ಪಟ್ಟಣ ಬಂದಾಗಿತ್ತು. ಸಂಜೆ 6.45 ಸಮಾವೇಶ ಮುಕ್ತಾಯಗೊಂಡಿತು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]













Click it and Unblock the Notifications