ಶರಣ್ ಪಂಪ್ ವೆಲ್ ತಾಕತ್ ಇದ್ದರೆ ನನ್ನೆದುರು ಬರಲಿ: ಮಂಗಳೂರಿನಲ್ಲಿ ಪ್ರಚೋಧನಕಾರಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಫಾಝಿಲ್ ತಂದೆ
ತುಮಕೂರಿನಲ್ಲಿ ಸುರತ್ಕಲ್ ಫಾಝಿಲ್ ಹತ್ಯೆಯ ರೂವಾರಿ ತಾವೇ ಎಂದು ಭಜರಂಗದಳದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ಫಾಝಿಲ್ ತಂದೆ ಕೂಡ ಇದೇ ಹಾದಿಯಲ್ಲಿ ಪ್ರಚೋಧನಕಾರಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಮಂಗಳೂರು, ಜನವರಿ, 30: ತುಮಕೂರು ಹಾಗೂ ಉಳ್ಳಾಲದಲ್ಲಿ ಭಜರಂಗದಳದ ನೇತೃತ್ವದಲ್ಲಿ ಶೌರ್ಯ ಯಾತ್ರೆ ನಡೆದಿದ್ದು, ಈ ವೇಳೆ ಸುರತ್ಕಲ್ ಫಾಝಿಲ್ ಹತ್ಯೆಯ ರೂವಾರಿ ತಾವೇ ಎಂದು ಭಜರಂಗದಳದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ಶರಣ್ ಪಂಪ್ ವೆಲ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಫಾಝಿಲ್ ತಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡುವಂತೆ ಫಾಝಿಲ್ ತಂದೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಫಾಝಿಲ್ ಹತ್ಯೆ ಸಮರ್ಥಿಸಿಕೊಂಡ ಶರಣ್ ಪಂಪ್ವೆಲ್: ಶೌರ್ಯ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ
ಪ್ರಚೋಧನಕಾರಿ ಹೇಳಿಕೆ ನೀಡಿದ ಫಾಝಿಲ್ ತಂದೆ
ದೂರು ನೀಡಿದ ಫಾಝಿಲ್ ತಂದೆ ಉಮರ್ ಫಾರೂಕ್ ಮಾತನಾಡಿ, "ಶರಣ್ ಪಂಪ್ ವೆಲ್ ತನ್ನ ಪುತ್ರನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಓರ್ವನನ್ನು ಹತ್ಯೆ ಮಾಡಿದ್ದಾರೆ. ಅದು ನಿಜವಾದ ಶೌರ್ಯ ಅಲ್ಲ, ಹೇಡಿತನವಾಗಿದೆ. ಶರಣ್ ಪಂಪ್ ವೆಲ್ಗೆ ತಾಕತ್ ಇದ್ದಲ್ಲಿ ನಾನು ಒಬ್ಬನೇ ಬರುತ್ತೇನೆ. ಆಗ ನನ್ನೊಂದಿಗೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ. ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದೂಗಳು ಒಳ್ಳೆಯವರು. ಆದರೆ ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯ ಮಾಡುವವರಾಗಿದ್ದಾರೆ. ಈ ಬಗ್ಗೆ ಎಡಿಜಿಪಿಗೂ ಮನವಿ ಮಾಡಿದ್ದೇನೆ. ಪೊಲೀಸರು ಶರಣ್ ಪಂಪ್ ವೆಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬಹುದಿತ್ತು," ಎಂದು ಹೇಳಿದರು.
ಗಡಿಪಾರು ಮಾಡಬೇಕು
ಇನ್ನು ಫಾಝಿಲ್ ಹತ್ಯೆ ವಿಚಾರದಲ್ಲಿ ಶರಣ್ ಪಂಪ್ ವೆಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಯುಟಿ ಖಾದರ್, ಈ ರೀತಿಯ ಹೇಳಿಕೆ ಕೊಡುವವರನ್ನು ಗಡಿಪಾರು ಮಾಡಿ. ಕೊಲೆ ಘಟನೆಗಳಿಗೆ ಪ್ರೇರಣೆ ನೀಡುವಂತಹ ಹೇಳಿಕೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ಹೇಳಿಕೆ ಕೊಡುವವರು ನಿಜವಾದ ದೇಶದ್ರೋಹಿಗಳು. ಸಮಾಜ ಒಗ್ಗಾಟಾಗಿರಬೇಕೆಂಬುದು ನಮ್ಮ ನಿಲುವಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಯಾರ ಕೊಲೆಯೂ ಆಗಬಾರದು ಎಂದು ಪ್ರಯತ್ನಪಡಬೇಕು ಎಂದು ಹೇಳಿದರು.
BJPಯವರು ಕೊಲೆ ಆಗುವುದಕ್ಕೆ ಕಾಯುತ್ತಿದ್ದಾರೆ
ಬಿಜೆಪಿಯವರು ಕೊಲೆ ಆಗುವುದಕ್ಕೆ ಕಾಯುತ್ತಿದ್ದಾರೆ. ಒಂದಾದರೆ ಎರಡು ಆಗಬೇಕೆಂಬ ಮನಸ್ಥಿತಿ ಯಾಕೆ? ಕೊಲೆಯಾದ ಕುಟುಂಬಕ್ಕೆ ಮಾತ್ರ ಆ ಸಾವಿನ ನೋವು ಗೊತ್ತಿರುತ್ತದೆ. ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಯಾಗಬೇಕು. ಈ ರೀತಿಯ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕು. ಮನೆಗೆ, ಊರಿಗೆ, ಜಿಲ್ಲೆಗೆ ಇಂತಹವರು ಭಾರ. ಇಂತಹ ಮೆಂಟಲ್ ಕೇಸ್ಗಳನ್ನು ಇಟ್ಟುಕೊಂಡು ನಾವು ಯಾಕೆ ಜಿಲ್ಲೆ ಸುತ್ತಾಡಬೇಕು? ಮುಂದೆ ನಮ್ಮ ಸರ್ಕಾರ ಬಂದರೆ ರಾಜ್ಯದಲ್ಲಿ ನಡೆದಿರುವ ಎಲ್ಲಾ ಕೊಲೆ ಪ್ರಕರಣಗಳನ್ನು ಮರು ತನಿಖೆ ಮಾಡುತ್ತೇವೆ. ಸಂಶಯವಿರುವ ಪ್ರಕರಣಗಳನ್ನು ತನಿಖೆ ಮಾಡುತ್ತೇವೆ. ನೈಜ ಅಪಾರಧಿಗಳು, ಪ್ರೇರಣೆ ಕೊಟ್ಟವರನ್ನು ಬಂಧಿಸುತ್ತೇವೆ ಅಂತಾ ಹೇಳಿದರು.