ದಕ್ಷಿಣ ಕನ್ನಡದಲ್ಲಿ 441 ಡೆಂಗ್ಯೂ ಪ್ರಕರಣ; 5 ತಂಡಗಳಿಂದ ಕ್ಷಿಪ್ರ ಕಾರ್ಯಾಚರಣೆ
ಮಂಗಳೂರು, ಜುಲೈ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿವೆ. ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇಂದಿನವರೆಗೆ ಜಿಲ್ಲೆಯಲ್ಲಿ 441 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಅಪಾಯದ ಮುನ್ಸೂಚನೆ ನೀಡಿದೆ.
ಮಂಗಳೂರಿನಲ್ಲಿ ಹೆಚ್ಚಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗಿರುವ ಜಪ್ಪು, ಮಹಾಕಾಳಿ ಪಡ್ಪು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ, ಸೊಳ್ಳೆಗಳ ಉತ್ಪತ್ತಿ ಮಾಡುವ ತಾಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆಗಳ ಲಾರ್ವಾ ಕಾಣಿಸಿಕೊಂಡಲ್ಲಿ ಸಂಬಂಧಪಟ್ಟವರಿಗೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣ ಕನ್ನಡದಲ್ಲಿ ಏಕಾಏಕಿ ಏರಿದೆ ಡೆಂಗ್ಯೂ ಪ್ರಕರಣ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳು ಉಲ್ಬಣಗೊಂಡಿದ್ದು, ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಫಾಗಿಂಗ್ ನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿನ್ನೆಯಿಂದ ಮಳೆ ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಸೊಳ್ಳೆಗಳ ಲಾರ್ವಾ ನಾಶಗೊಂಡು ರೋಗ ನಿಯಂತ್ರಣವಾಗಲಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಡೆಂಗ್ಯೂ ನಿಯಂತ್ರಣಕ್ಕೆ ನಗರದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ 5 ಪ್ರಮುಖ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಲಿವೆ. ಒಂದು ತಂಡ ಯೋಜನೆ ಮತ್ತು ಅಂಕಿಅಂಶ ಸಂಗ್ರಹ ಕಾರ್ಯ ನಡೆಸಿದರೆ, ಮತ್ತೊಂದು ತಂಡ ಮಾಹಿತಿ ಕಲೆ ಹಾಕಲಿದೆ. ಇನ್ನೊಂದು ಮಹಾನಗರ ಪಾಲಿಕೆ ತಂಡ ಸ್ವಚ್ಛತಾ ಕಾರ್ಯವನ್ನು ಮಾಡಲಿದೆ. ಮತ್ತೊಂದು ತಂಡ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸುವ ಕಾರ್ಯ ನಡೆಸಲಿದೆ ಹಾಗೂ ಮತ್ತೊಂದು ತಂಡ ಮುಂಜಾಗೃತಾ ಹಾಗೂ ನಿಯಂತ್ರಣ ಕ್ರಮಗಳನ್ನು ನಡೆಸಲಿದೆ. ಸರಕಾರಿ ಅಧಿಕಾರಿಗಳು, ವೈದ್ಯರಿಂದ ತಪಾಸಣೆ, ಪರಿಶೀಲನೆ, ಕ್ರಮಗಳ ಜತೆಗೆ ಖಾಸಗಿ ವೈದ್ಯರು, ಎನ್ಜಿಒಗಳಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ಹೇಳಿದರು.
ದಕ್ಷಿಣ ಕನ್ನಡದಲ್ಲಿ 14 ದಿನದಲ್ಲಿ 128 ಮಂದಿಗೆ ಡೆಂಗ್ಯೂ ಜ್ವರ
"ಡೆಂಗ್ಯೂ ಹಾಗೂ ಮಲೇರಿಯಾ ಕುರಿತು ಜನರು ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ತಲೆಸುತ್ತು, ಗಂಟಲು ನೋವು, ಜ್ವರದ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು" ಎಂದು ಅವರು ಮನವಿ ಮಾಡಿದ್ದಾರೆ.