Breaking:ಪ್ರವೀಣ್ ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳ ಬಂಧನ
ಮಂಗಳೂರು, ಆಗಸ್ಟ್ 11: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಕೇರಳ ಗಡಿಭಾಗ ತಲಪಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
Recommended Video
ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ಅಂಗಡಿ ಮುಚ್ಚಿ ಮನೆಗೆ ತೆರಳುವ ವೇಳೆ ಕೇರಳ ನೋಂದಣಿಯ ಬೈಕ್ನಲ್ಲಿ ಬಂದ ಮೂವರ ದುಷ್ಕರ್ಮಿಗಳ ತಂಡ ಪ್ರವೀಣ್ರನ್ನು ಬರ್ಬರವಾಗಿ ಕೊಂದು ಪರಾರಿಯಾಗಿದ್ದರು. ಪ್ರವೀಣ್ ಹತ್ಯೆ ಮಾಡಿದ ನಂತರ ಆರೋಪಿಗಳು ತಲೆತಪ್ಪಿಸಿಕೊಂಡು ಕೇರಳಕ್ಕೆ ಪರಾರಿಯಾಗಿದ್ದರು. ಆರೋಪಿಗಳು ಹಾಗಿಂದಾಗೆ ಸ್ಥಳಾಂತರ ಮಾಡಿ ಪೊಲೀಸರ ಕಣ್ಣುತಪ್ಪಿಸಿ ತಿರುಗುತ್ತಿದ್ದರು. ಈ ಪ್ರಕರಣ ಸಂಬಂಧ 7 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದರು.
ಇದೀಗ ಪ್ರಕರಣದ ಪ್ರಮುಖ ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಕೇರಳ ಗಡಿಭಾಗ ತಲಪಾಡಿ ಚೆಕ್ ಪೋಸ್ಟ್ ಬಳಿ ಸುಳ್ಯ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ ತಂಡ ಬಂಧಿಸಿದೆ. ಆರೋಪಿಗಳಲ್ಲಿ ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುತ್ತಿದ್ದ , ರಿಯಾಜ್ ಬೆಳ್ಳಾರೆ ಹಾಗೂ ಸುಳ್ಯದಲ್ಲಿ ಚಿಕನ್ ಸಪ್ಲೈ ಮಾಡುತ್ತಿದ್ದ ಹಾಗೂ ಬಶೀರ್ ಹೊಟೇಲ್ ಕೆಲಸ ಮಾಡುತ್ತಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಹತ್ಯೆಯ ಬಳಿಕ ಆರೋಪಿಗಳು ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ ಬಳಿಗೆ ಹೋಗಿದ್ದಾರೆ. ನಂತರ ಸ್ಥಳಾಂತರ ಮಾಡುತ್ತಾ ಪೊಲೀಸರ ಕಣ್ಣು ತಪ್ಪಿಸಿ ತಿರುಗುತ್ತಿದ್ದರು. ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು, ಮಂಡ್ಯ, ಉಡುಪಿ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ಆರೋಪಿಗಳಿಗೆ ಬೇರೆ ಬೇರೆ ಜಾಗದಲ್ಲಿ ಆಶ್ರಯ ನೀಡಿ ಸಹಾಯ ಮಾಡಿರುವವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಹಂತಕರು ಹತ್ಯೆಗೆ ಸ್ಪ್ಲೆಂಡರ್ ಬೈಕ್ ಬಳಕೆ ಮಾಡಿದ್ದು, ತಪ್ಪಿಸಿಕೊಳ್ಳಲು ಐದಾರು ವಾಹನ ಬಳಕೆ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ನನ್ನು ಏಕೆ ಟಾರ್ಗೆಟ್ ಮಾಡಲಾಗಿದೆ ಎನ್ನುವುದು ತನಿಖೆಯ ಬಳಿಕ ತಿಳಿಯಲಿದೆ.ತನಿಖೆಯ ಸಂಪೂರ್ಣ ವರದಿಯನ್ನು ಎನ್.ಐ.ಎ ನೀಡಲಿದ್ದೇವೆ. ಅವರು ತನಿಖೆ ಮುಂದುವರೆಸಿದ್ದಾರೆ. ಬಂಧಿತ ಮೂರು ಪ್ರಮುಖ ಆರೋಪಿಗಳ ವಿಚಾರಣೆಯ ಬಳಿಕ ಪ್ರಕರಣವನ್ನುಎನ್.ಐ.ಎಗೆ ಹಸ್ತಾಂತರಿಸುತ್ತೇವೆ ಎಂದರು.
ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications