ಅತಂತ್ರರಾದ ಸುರತ್ಕಲ್ ಟೋಲ್ ಕಾರ್ಮಿಕರಿಗೆ ನೆರವಾದ ಪ್ರತಿಭಾ ಕುಳಾಯಿ
ಮಂಗಳೂರು, ಡಿ. 05: ಸುರತ್ಕಲ್ನ ಅಕ್ರಮ ಟೋಲ್ ಗೇಟ್ ವಿರುದ್ಧ ನಡೆದ ಹೋರಾಟ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೋರಾಟದಲ್ಲಿ ಮುಖ್ಯಪಾತ್ರ ವಹಿಸಿದ್ದ ದಿಟ್ಟ ಹೆಣ್ಣು ಮಗಳು ಪ್ರತಿಬಾ ಕುಳಾಯಿ. ಈಗ ಮತ್ತೊಂದು ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು, ಟೋಲ್ ಗೇಟ್ ತೆರವಾದ ಬಳಿಕ ಟೋಲ್ ಗೇಟ್ನಲ್ಲಿ ಉದ್ಯೋಗದಲ್ಲಿದ್ದ ಮೂವತ್ತೈದು ಜನರಿಗೆ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ನೆರವಾಗಿದ್ದಾರೆ. ಕೊಟ್ಟ ಮಾತಿನಂತೆಯೇ ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35 ಮಂದಿಯನ್ನು ಭೇಟಿಯಾಗಿ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ದೊರಕಿಸಿ ಕೊಟ್ಟಿದ್ದಾರೆ.
ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ವಿವಾಹ, ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆ ವೈರಲ್
ಟೋಲ್ ಇನ್ ಚಾರ್ಜ್ ಮಿಥುನ್ ಬೈಕಂಪಾಡಿ ಅವರನ್ನು ಸಂಪರ್ಕಿಸಿದ ಪ್ರತಿಭಾ ಕುಳಾಯಿ ಮೂವತ್ತೈದು ಮಂದಿಯಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಇಟ್ಟ 22 ಮಂದಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ದೊರಕಿಸಿ ಕೊಟ್ಟಿದ್ದಾರೆ.
ಉದ್ಯೋಗ ಕಳೆದುಕೊಂಡವರಲ್ಲಿ ಒಬ್ಬ ವಿದ್ಯಾರ್ಥಿಯಾಗಿದ್ದು, ಆತನ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಹಗಲು ಕೆಪಿಟಿಯಲ್ಲಿ ಕಲಿತು ರಾತ್ರಿ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಕುಳಾಯಿ ಫೌಂಡೇಶನ್ ಮೂಲಕ ದತ್ತು ಪಡೆದು ಶಿಕ್ಷಣದ ಖರ್ಚು ವೆಚ್ಚ ನೋಡಿಕೊಳ್ಳುವ ಜೊತೆಗೆ ಉದ್ಯೋಗಕ್ಕೆ ವ್ಯವಸ್ಥೆಯನ್ನು ಪ್ರತಿಭಾ ಕುಳಾಯಿ ಮಾಡಿದ್ದಾರೆ.
ಇನ್ನೊಬ್ಬ ಮಹಿಳೆ ಟೋಲ್ನಲ್ಲಿ ದುಡಿದು ತನ್ನ ಮಕ್ಕಳನ್ನು ಸಾಕುತ್ತಿದ್ದು ಆಕೆಗೆ ಸೂಕ್ತ ಉದ್ಯೋಗ ಕೊಡಿಸಿ ಅವರ ಮಕ್ಕಳನ್ನು ಶೈಕ್ಷಣಿಕ ದತ್ತುನ್ನು ಪ್ರತಿಭಾ ಕುಳಾಯಿ ಪಡೆದಿದ್ದಾರೆ.
ಪ್ರತಿಭಾ ಕುಳಾಯಿ ತನ್ನ ಕುಳಾಯಿ ಫೌಂಡೇಶನ್ ಮೂಲಕ ಈಗಾಗಲೇ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆದಿದ್ದು, ಈ ವರ್ಷ ಇನ್ನಷ್ಟು ಮಕ್ಕಳನ್ನು ಶಿಕ್ಷಣದ ಉದ್ದೇಶದಿಂದ ದತ್ತು ಪಡೆಯಲು ಇಚ್ಚಿಸಿದ್ದಾರೆ.
ಸುರತ್ಕಲ್ ಟೋಲ್ ಡಿ.1 ರಿಂದ ತೆರವಾಗಿದೆ. ಈ ಹಿನ್ನಲೆಯಲ್ಲಿ ಟೋಲ್ ನಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಅತಂತ್ರರಾಗಿದ್ದರು. ಟೋಲ್ ತೆರವಾಗುವ ಮುನ್ನ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಟೋಲ್ನಲ್ಲಿ ದುಡಿಯುತ್ತಿರುವ ಎಲ್ಲರಿಗೂ ಉದ್ಯೋಗ ಕೊಡಿಸೋದಾಗಿ ಭರವಸೆ ನೀಡಿದ್ದರು.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.