ರಸ್ತೆ ಗುಂಡಿಗಳನ್ನು ಮುಚ್ಚಿದ ಸುಳ್ಯ ಸಬ್ ಇನ್ಸ್ ಪೆಕ್ಟರ್
ಮಂಗಳೂರು, ಆಗಸ್ಟ್ 09: ಕರಾವಳಿಯಲ್ಲಿ ಮತ್ತೆ ಭಾರೀ ಮಳೆ ಆರಂಭವಾಗಿದೆ. ಧೋ ಎಂದು ಸುರಿಯುವ ಮಳೆಯ ನಡುವೆ ವಾಹನ ಚಲಾಯಿಸುವುದು ಸಾಹಸವೇ ಸರಿ. ಅದರಲ್ಲೂ ಮಂಗಳೂರು-ಮೈಸೂರು ರಸ್ತೆಯಲ್ಲಿ ಮಾಣಿ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಸಾಕ್ಷಾತ್ ನರಕ ದರ್ಶನವಾಗುತ್ತದೆ.
ಹದಗೆಟ್ಟ ರಸ್ತೆ, ಕಿತ್ತುಹೋದ ಡಾಂಬರ್, ರಸ್ತೆ ನಡುವಿನಲ್ಲಿ ಮೃತ್ಯು ಕೂಪವಾಗಿರುವ ಗುಂಡಿಗಳ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಮಾತ್ರ ಶೂನ್ಯ.
ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪ್ರಾಣ ರಕ್ಷಣೆಗೆ ಲಾಠಿ ಹಿಡಿಯುವ ಕೈಗಳು ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸುಳ್ಯ ಸಬ್ ಇನ್ಸ್ಪೆಕ್ಟರ್ ರಸ್ತೆ ಮಧ್ಯೆ ಹಾರೆ ಹಿಡಿದು ರಸ್ತೆಗುಂಡಿ ಮುಚ್ಚುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಮಾಣಿ-ಮೈಸೂರು ರಸ್ತೆಯ ಪೆರಾಜೆ ಬಳಿ ಸುಳ್ಯ ಠಾಣಾ ಎಸ್.ಐ. ಮಂಜುನಾಥ ಅವರು ಹೊಂಡ ಮುಚ್ಚುವ ಕೆಲಸಕ್ಕೆ ಸಾಮಗ್ರಿಗಳನ್ನು ಕೊಂಡು ಹೋಗಿ, ಕೈಯಲ್ಲಿ ಹಾರೆ ಹಿಡಿದು ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆ ವಿಡಿಯೋ ವೈರಲ್ ಆಗಿದೆ.
ಕಳೆದ ಹಲವು ದಿನಗಳಿಂದ ಮಾಣಿ-ಮೈಸೂರು ಹೆದ್ದಾರಿಯ ಪೆರಾಜೆಯಲ್ಲಿ ರಸ್ತೆ ಮಧ್ಯ ಭಾಗದಲ್ಲಿಹಲವಾರು ಗೊಂಡಗಳು ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿ ಪರಿಣಮಿಸಿತ್ತು. ಪ್ರಯಾಣಿಕರು ಈ ಬಗ್ಗೆ ಅಳಲು ತೋಡಿಕೊಂಡಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಿವಿಗೆ ಹಾಕಿಕೊಂಡಿರಲಿಲ್ಲ.

ಈ ರಸ್ತೆಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸ್.ಐ. ಮಂಜುನಾಥ ಅವರು ಹೊಂಡ ಮುಚ್ಚಲು ಬೇಕಾದ ಸಿಮೆಂಟ್, ಇತರ ಸಾಮಗ್ರಿ, ಹಾರೆ, ಪಿಕಾಸು ಹಿಡಿದುಕೊಂಡು ಸ್ಥಳಕ್ಕೆ ತೆರಳಿದರು.
ಪೊಲೀಸ್ ಜೀಪು ಚಾಲಕರ ಜತೆಗೂಡಿ ರಸ್ತೆ ಬದಿಯಲ್ಲಿ ಹಾರೆ ಹಿಡಿದು ಹೊಂಡ ಮುಚ್ಚುವ ಕೆಲಸ ನಿರ್ವಹಿಸಿದರು. ಇದನ್ನು ಕಂಡ ಕೆಲ ಸಾರ್ವಜನಿಕರೂ ಎಸ್.ಐ. ಅವರೊಂದಿಗೆ ಕೈ ಜೋಡಿಸಿದರು.












Click it and Unblock the Notifications