ಭಜರಂಗ ದಳದಂತೆ ಪಿಎಫ್ಐ ಕೂಡಾ ಕೋಮುವಾದಿ - ಕೋಡಿಜಾಲ್
ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದರೆ ಪಿಎಫ್ಐ ಪೊಲೀಸ್ ಆಯುಕ್ತರನ್ನು ಕಂಡು ಮಾತನಾಡಬೇಕಿತ್ತು. ಆದರೆ ಸಂಘಟನೆ ಏಕಾಏಕಿ ಪೊಲೀಸ್ ಆಯುಕ್ತರ ಕಚೇರಿ ಮೇಲೆ ಮುತ್ತಿಗೆ ಹಾಕಿದ್ದು ತಪ್ಪು ಎಂದು ಇಬ್ರಾಹೀಂ ಕೋಡಿಜಾಲ್ ಹೇಳಿದ್ದಾರೆ.
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಸಾಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಪಿಎಫ್ಐ ಸಂಘಟನೆ ಕೂಡಾ ಭಜರಂಗ ದಳದಂತೆ ಕೋಮುವಾದಿ ಸಂಘಟನೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ.
ಈ ಬಗ್ಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್ಐ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದರೆ ಪಿಎಫ್ಐ ಸಂಘಟನೆಯು ಪೊಲೀಸ್ ಆಯುಕ್ತರನ್ನು ಕಂಡು ಮಾತನಾಡಬೇಕಿತ್ತು. ಆದರೆ ಪಿಎಫ್ಐ ಸಂಘಟನೆ ಏಕಾಏಕಿ ಪೊಲೀಸ್ ಆಯುಕ್ತರ ಕಚೇರಿ ಮೇಲೆ ಮುತ್ತಿಗೆ ಹಾಕಲು ಮುಂದಾಗಿರುವುದು ಸರಿಯಲ್ಲ ಎಂದರು.[ನನ್ನ ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಸಹಿಸಲ್ಲ -ಗುಡುಗಿದ ಕಮಿಷನರ್]

ಪಿಎಫ್ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಜಾರ್ಜ್ ಮಾಡಿದ್ದು ಸರಿಯೇ? ಎಂಬ ಪ್ರಶ್ನೆಗೆ ಉತ್ತರ ನೀಡದ ಇಬ್ರಾಹೀಂ ಕೋಡಿಜಾಲ್, ಅಹ್ಮದ್ ಖುರೇಷಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದೆ ಆದರೆ ಅದು ಖಂಡನೀಯ. ಅದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
ರಾಜ್ಯದಲ್ಲಿ ನಿಮ್ಮದೇ ಆಡಳಿತ ಪಕ್ಷವಿದೆ. ಹೀಗಿರುವಾಗ ನೀವು ಖಂಡಿಸುವುದು ಯಾರನ್ನು, ಪಕ್ಷವನ್ನೋ, ಸರಕಾರವನ್ನೋ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೋಡಿಜಾಲ್, ಇಲ್ಲಿ ಪಕ್ಷದ ಪ್ರಶ್ನೆಯಲ್ಲ. ಯಾವುದೇ ಅಧಿಕಾರಿ ತನ್ನ ಸಂವಿಧಾನದತ್ತ ಅಧಿಕಾರವನ್ನು ದುರುಪಯೋಗ ಪಡಿಸುವುದು ಸರಿಯಲ್ಲ. ಪೊಲೀಸರು ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಎಸಗಿದ್ದರೆ ಅದು ಖಂಡನೀಯ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಕಂಡು ಮಾತನಾಡಿದ್ದೇವೆ. ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಕೋಡಿಜಾಲ್ ಹೇಳಿದರು.[ಪಿಎಫ್ಐ ಈಗ ನನ್ನನ್ನು ಟಾರ್ಗೆಟ್ ಮಾಡಿದೆ: ಸಚಿವ ಖಾದರ್]
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೋಡಿಜಾಲ್, ಕಾಂಗ್ರೆಸ್ ಜಾತ್ಯತೀತ ಪಕ್ಷ. ಹಾಗಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಕವಿತಾ ಸನಿಲ್, ಮಾಜಿ ಮೇಯರ್ ಹರಿನಾಥ್, ಪಕ್ಷದ ಮುಖಂಡರಾದ ಹರ್ಷರಾಜ ಮುದ್ಯ, ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications