ಮಂಗಳೂರು; ಅನ್ಯಧರ್ಮದವರ ವಾಹನ ಪಾರ್ಕಿಂಗ್ ನಿಷೇಧ!
ಮಂಗಳೂರು, ಆಗಸ್ಟ್ 29; ಸದಾ ಕೋಮು ವಿಷಯದಲ್ಲಿ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಸದ್ಯ ಮತ್ತೊಂದು ವಿಚಾರಕ್ಕೆ ಚರ್ಚೆಯಾಗುವ ಸಾಧ್ಯತೆಗಳಿವೆ. ಪುತ್ತೂರಿನಲ್ಲಿ ಎಸ್. ಡಿ. ಪಿ. ಐ ಸ್ವಾತಂತ್ರ್ಯ ವೀರ ಸಾವರ್ಕರ್ ರಥಯಾತ್ರೆಗೆ ಅಡ್ಡಿ ಮಾಡಿದ ವಿಚಾರ ದೊಡ್ಡ ಸದ್ದು ಮಾಡಿದ ಬಳಿಕ ಈಗ ಪುತ್ತೂರಿನಲ್ಲಿ ಮತ್ತೊಂದು ವಿಚಾರ ಮುನ್ನಲೆಗೆ ಬಂದಿದೆ.
ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಹಿಂದೂಗಳು ಹೊರತುಪಡಿಸಿ ಅನ್ಯಧರ್ಮದವರು ವಾಹನಗಳನ್ನು ನಿಲ್ಲಿಸಬಾರದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆದೇಶ ಮಾಡಿದೆ.
ದೇವಸ್ಥಾನದ ಎದುರಿನ ವಿಶಾಲವಾದ ಗದ್ದೆಯಲ್ಲಿ ಹಿಂದೂಗಳು ಹೊರತುಪಡಿಸಿ, ಬೇರೆ ಧರ್ಮದವರು ಯಾರೂ ವಾಹನವನ್ನು ನಿಲ್ಲಿಸಬಾರದು ಅಂತಾ ದೇವಸ್ಥಾನ ಪ್ರಕಟಣೆ ಹೊರಡಿಸಿದೆ. ಈ ಕುರಿತು ಚರ್ಚೆಗಳು ಆರಂಭವಾಗಿವೆ.
ಅಲ್ಲದೇ ಬೇರೆ ಧರ್ಮದವರು ವಾಹನ ನಿಲ್ಲಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಆದೇಶದಲ್ಲಿ ತಿಳಿಸಿದೆ. ಈ ಬಗ್ಗೆ ದೇವಳದ ದೇವಮಾರು ಗದ್ದೆಯಲ್ಲಿರುವ ಪಂಚಾಕ್ಷರಿ ಮಂಟಪದಲ್ಲಿ ಫ್ಲೆಕ್ಸ್ ಹಾಕಲಾಗಿದ್ದು, ಅನ್ಯಧರ್ಮದವರು ದೇವಳದ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಅನ್ಯ ಧರ್ಮದವರಿಗೆ ಪಾರ್ಕಿಂಗ್ ಇಲ್ಲ
ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಡಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಬರೋದರಿಂದ ಹಿಂದೂಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಬೇಕು ಮತ್ತು ಅನ್ಯಧರ್ಮದವರಿಗೆ ದೇವಳಕ್ಕೆ ಸೇರಿದ ಜಾಗದಲ್ಲಿ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿತ್ತು. ಹಿಂದೂ ಪರ ಸಂಘಟನೆಗಳ ಮನವಿ ಆಲಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ನೇತೃತ್ವದ ಸಮಿತಿ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಮಾರು ಗದ್ದೆಯಲ್ಲಿ ಹಿಂದೂಗಳು ಹೊರತು ಪಡಿಸಿ ಅನ್ಯಧರ್ಮದವರು ವಾಹನ ಪಾರ್ಕಿಂಗ್ ಮಾಡಬಾರದು ಎಂಬ ಆದೇಶ ಹೊರಡಿಸಿದ್ದಾರೆ.

ವ್ಯಾಪಾರಕ್ಕೆ ನಿಷೇಧ ಹೇರಲಾಗಿತ್ತು
ಈ ಹಿಂದೆಯೂ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿತ್ತು. ಹಿಂದೂ ಸಂಘಟನೆಗಳ ಮನವಿಯಂತೆ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಷೇಧ ಮಾಡಿತ್ತು. ಇದಾದ ಬಳಿಕ ಈಗ ಅನ್ಯಧರ್ಮದವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಷೇಧಿಸಿದೆ.

ಚರ್ಚೆಗೆ ಕಾರಣವಾದ ಆದೇಶ
ಸದ್ಯ ದೇವಾಲಯದ ಈ ಆದೇಶ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶಾಲವಾದ ದೇವಮಾರು ಗದ್ದೆಯಲ್ಲಿ ಅನ್ಯಧರ್ಮದವರಿಗೆ ವಾಹನ ಪಾರ್ಕಿಂಗ್ ಅವಕಾಶ ನೀಡದಿರೋದನ್ನು ಹಿಂದೂ ಪರ ಸಂಘಟನೆಗಳು ಸ್ವಾಗತ ಮಾಡಿದರೆ, ಎಡ ಪಂಥೀಯರು ಮಾತ್ರ ಇದು ಅಸಹಿಷ್ಣುತೆಯ ಪರಮಾವಧಿ ಅಂತಾ ಟೀಕೆ ಮಾಡಿದ್ದಾರೆ. ವಾಹನದಲ್ಲೂ ಧರ್ಮ ಹುಡುಕುವ ಕೆಲಸ ಮಾಡೋದು ಸರಿ ಅಲ್ಲ ಅಂತಾ ವಿರೋಧಿಸಿದ್ದಾರೆ.

ಸಾಕಷ್ಟು ದೂರುಗಳು ಬಂದಿದ್ದವು
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, "ಹಿಂದೂ ಧಾರ್ಮಿಕ ದತ್ತಿ ಕಾಯಿದೆಯಡಿ ಮಹಾಲಿಂಗೇಶ್ವರ ದೇವಸ್ಥಾನದ ಬರೋದರಿಂದ, ಹಿಂದೂ ಭಕ್ತಾಧಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಈ ಹಿಂದೆ ಅನ್ಯಧರ್ಮದವರು ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಿದ್ದರಿಂದ ದೇವಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತಿತ್ತು ಮತ್ತು ಈ ಬಗ್ಗೆ ಸಾಕಷ್ಟು ದೂರುಗಳೂ ಬಂದಿರುವ ಹಿನ್ನಲೆಯಲ್ಲಿ ಈ ಆದೇಶವನ್ನು ಮಾಡಲಾಗಿದೆ" ಅಂತಾ ಸ್ಪಷ್ಟ ಪಡಿಸಿದ್ದಾರೆ.
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಸದ್ಯ ಅನ್ಯಧರ್ಮದವರಿಗೆ ಪಾರ್ಕಿಂಗ್ ನಿಷೇಧ ವಿಚಾರ ಚರ್ಚೆಯನ್ನು ಹುಟ್ಟು ಹಾಕಿದೆ. ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಆದೇಶ ಇನ್ಯಾವ ರೂಪವನ್ನು ಪಡೆಯುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications