ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ
ಮಂಗಳೂರು, ಜನವರಿ 02; ಮಂಗಳೂರು-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಮಾರ್ಗ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ. ರೈಲ್ವೆ ಇಲಾಖೆ ಈ ರೈಲು ಸೇವೆಯನ್ನು 31/3/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ರೈಲು ಮಾರ್ಗ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದೆ. ಮಂಗಳೂರು-ಮೀರಜ್ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲನ್ನು ಕೊಂಕಣ ಮಾರ್ಗದಲ್ಲಿ ಪುನರ್ ಆರಂಭಿಸುವುದಕ್ಕೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರು-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಸಂಚಾರ ನಡೆಸುತ್ತಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಮಲೆನಾಡ ಮೂಲಕ ಸಂಪರ್ಕಿಸುವ ರೈಲು ಇದಾಗಿದೆ.

ಈ ರೈಲಿನಿಂದ ಕರಾವಳಿಗಳ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ, ಆಸ್ಪತ್ರೆಗಳಿಗೆ ಆಗಮಿಸುವವರಿಗೆ ಸಹಾಯಕವಾಗಿದೆ. ಈ ರೈಲಿನಿಂದ ಮೂಡುಬಿದಿರೆ, ಪುತ್ತೂರು ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಕೊಂಕಣ ಮಾರ್ಗದಲ್ಲಿ ಈ ರೈಲು ಓಡಿಸುವುದರಿಂದ ಸದ್ಯ ರೈಲು ಬಳಕೆ ಮಾಡುತ್ತಿರುವ ಜನರಿಗೆ ತೊಂದರೆಯಾಗಲಿದೆ ಎಂದು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಹೇಳಿದೆ.
ಮರು ಆರಂಭಿಸಲು ವಿರೋಧ; ಮಂಗಳೂರು-ಮೀರಜ್ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲನ್ನು ಕೊಂಕಣ ಮಾರ್ಗದಲ್ಲಿ ಪುನರ್ ಆರಂಭಿಸುವುದಕ್ಕೂ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಕೊಂಕಣ ಮಾರ್ಗದಲ್ಲಿ ಈಗಾಗಲೇ 'ಪೂರ್ಣ ಎಕ್ಸ್ಪ್ರೆಸ್' ಪುಣೆ ಮತ್ತು ಎರ್ನಾಕುಲಂ ನಡುವೆ ಸಂಚಾರ ನಡೆಸುತ್ತಿದೆ.
ಈ ರೈಲು ವಯಾ ಮಂಗಳೂರು, ಮಡಗಾಂವ್, ಮೀರಜ್ ಮಾರ್ಗದಲ್ಲಿ ಸಂಚಾರ ನಡೆಸುತ್ತಿರುವಾಗ ಮಂಗಳೂರು-ಮೀರಜ್ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲನ್ನು ಪುನಃ ಆರಂಭಿಸುವುದು ಸೂಕ್ತವಲ್ಲ ಎಂದು ಸಮಿತಿ ಹೇಳಿದೆ.
ಮಂಗಳೂರು-ಮೀರಜ್ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲನ್ನು ಪುನಃ ಆರಂಭಿಸುವ ಬದಲು 'ಪೂರ್ಣ ಎಕ್ಸ್ಪ್ರೆಸ್' ರೈಲನ್ನು ಪ್ರತಿದಿನ ಓಡಿಸಬಹುದಾಗಿದೆ ಎಂದು ಸಮಿತಿ ರೈಲ್ವೆ ಇಲಾಖೆಗೆ ಸಲಹೆ ನೀಡಿದೆ.
ರೈಲು ಸೇವೆ ವಿಸ್ತರಣೆ; ಮಂಗಳೂರು-ವಿಜಯಪುರ ಪ್ರತಿದಿನದ ರೈಲು ಸೇವೆಯನ್ನು ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದಿನ ಆದೇಶದಂತೆ ವಿಜಯಪುರದಿಂದ ಹೊರಡುವ ರೈಲು ನಂಬರ್ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲು ಸೇವೆಯು 31/1/2023ಕ್ಕೆ ಅಂತ್ಯವಾಗಬೇಕಿತ್ತು. ಈಗ ರೈಲು ಸೇವೆಯನ್ನು 31/3/2023ರ ತನಕ ವಿಸ್ತರಣೆ ಮಾಡಲಾಗಿದೆ.
ಇನ್ನು ಮಂಗಳೂರಿನಿಂದ ಹೊರಡುವ ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ 1/2/2023ರಂದು ಅಂತ್ಯಗೊಳ್ಳಬೇಕಿತ್ತು. ಹೊಸ ಆದೇಶದಂತೆ ಈ ರೈಲು 1/4/2023ರ ತನಕ ಸಂಚಾರ ನಡೆಸಲಿದೆ.
ಮಂಗಳೂರು ಜಂಕ್ಷನ್-ವಿಜಯಪುರ ರೈಲು ವಿಶೇಷ ರೈಲಾಗಿ ಓಡುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಅದರ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ಈ ರೈಲು ಸೇವೆಯನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆಯೂ ಇದೆ. ಕೋವಿಡ್ ಸಮಯದಲ್ಲಿ ಈ ರೈಲು ಸೇವೆ ಸ್ಥಗಿತವಾಗಿತ್ತು, ಈಗ ಪುನಃ ಆರಂಭಿಸಲಾಗಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.












Click it and Unblock the Notifications