ಆನ್ಲೈನ್ ಲೋನ್; ಕರಾವಳಿಯಲ್ಲಿ ಇಬ್ಬರು ಯುವಕರ ಆತ್ಮಹತ್ಯೆ
ಮಂಗಳೂರು, ಜನವರಿ 10; ಕ್ಷಣಮಾತ್ರದಲ್ಲಿ ಲೋನ್ ನೀಡುವ ಆನ್ಲೈನ್ ಲೋನ್ ಜಾಲಕ್ಕೆ ಸಿಲುಕಿ ಕರಾವಳಿಯ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಸೆಂಬರ್ 30ರಂದು ಉಡುಪಿಯ ಕುಂದಾಪುರದ ಯುವಕ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡರೆ, ಸೋಮವಾರ ಮಂಗಳೂರಿನ ಪಕ್ಷಿಕರೆಯ ಯುವಕ ತನ್ನ ಕಛೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇಬ್ಬರ ಡೆತ್ನೋಟ್ ನಲ್ಲಿ ಆನ್ ಲೈನ್ ಸಾಲದ ಬಗ್ಗೆ ಬರೆದುಕೊಂಡಿದ್ದಾರೆ.
ಮಂಗಳೂರು ನಗರ ಹೊರವಲಯದ ಕುಳಾಯಿಯ ಸನ್ ರೈಸ್ ಕಾರ್ಪೋರೇಷನ್ ಕಚೇರಿಯಲ್ಲಿ ಘಟನೆ ನಡೆದಿದ್ದು, ಪಕ್ಷಿಕೆರೆ ನಿವಾಸಿ ಸುಶಾಂತ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಚೇರಿ ಒಳಗೆಯೇ ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟ್ನಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಬರೆದಿದ್ದಾರೆ.
ತುಳುವಿನಲ್ಲಿ ಡೆತ್ನೋಟ್ ಬರೆದಿರುವ ಸುಶಾಂತ್, ಎಲ್ಲರಿಗೂ ಸ್ವಾರಿ ಯಾರ ನಂಬಿಕೆಯೂ ಉಳಿಸಿಕೊಳ್ಳಲು ಆಗಿಲ್ಲ. ಹಣದ ವಿಚಾರದಲ್ಲಿ ತೊಂದರೆ ಆದರೆ ಕ್ಷಮಿಸಿ. ಆನ್ಲೈನ್ ಲೋನ್ನವರು ಕರೆ ಮಾಡಿದರೆ ಮೃತಪಟ್ಟಿದ್ದಾನೆ ಎಂದು ಹೇಳಿ ಅಂತಾ ಸುಶಾಂತ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಸುಶಾಂತ್ ಹೆತ್ತವರು ಹಲವು ವರ್ಷಗಳ ಹಿಂದೆ ಮೃತರಾಗಿದ್ದು,15 ವರ್ಷಗಳಿಂದ ಕಿನ್ನಿಗೋಳಿಯ ಪಕ್ಷಿಕೆರೆಯಲ್ಲಿ ತನ್ನ ಸಹೋದರನ ಜೊತೆ ವಾಸವಾಗಿದ್ದರು.
ಡಿಸೆಂಬರ್ 30ರಂದು ಇದೇ ಮಾದರಿಯಲ್ಲಿ ಉಡುಪಿಯ ಯುವಕನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ವಿಘ್ನಶ್ ಮೃತ ಯುವಕ. ವಿಘ್ನೇಶ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸದ್ಯ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಸ್ವ ಉದ್ಯೋಗ ಮಾಡುವ ನಿಟ್ಟಿನಲ್ಲಿ ಮೊಬೈಲ್ ಆಪ್ ಮೂಲಕ ಲೋನ್ ಪಡೆದುಕೊಂಡಿದ್ದು, ಲೋನ್ ಬಡ್ಡಿ ತೀರಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದರು..
ಸಾಲ ಮರುಪಾವತಿ ಮಾಡಲಾಗದೆ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಘ್ನೇಶ್ ಸಹ ಡೆತ್ನೋಟ್ ಬರೆದಿದ್ದರು.
ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡಿರುವ ಸಾಲ. ಮೊಬೈಲ್ ಆಪ್ನಲ್ಲಿ ಮಾಡಿಕೊಂಡಿರುವ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದುದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಲೋನ್ ಇದೆ ಕಟ್ಟಿ ಅಂತಾ ಯಾರಾದರೂ ಕಾಲ್ ಮಾಡಿದರೆ ಗೊತ್ತಿಲ್ಲ ಅವನು ಸತ್ತು ಹೋದ ಅಂತಾ ಹೇಳಿಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿಬಿಡಿ, ಕೆಳಗೆ ಆಫೀಸ್ ಕೆಲಸ ಮಾಡುವವನ ನಂಬರ್ ಇದೆ ಕಾಲ್ ಮಾಡಿ ತಿಳಿಸಿ ಎಂದು ಬರೆದಿದ್ದರು.
ಶುಕ್ರವಾರ ಸ್ಯಾಲರಿ ಬರುತ್ತೆ ಅಂತಾ ಎಟಿಎಂ ಪಿನ್ ನಂಬರ್ ಮತ್ತು ಕಛೇರಿ ನಂಬರ್ ಡೆತ್ ನೋಟ್ ನಲ್ಲಿಬರೆದು ಯುವಕ ವಿಘ್ಮೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 080 - 25497777.











Click it and Unblock the Notifications