ನಿಲ್ದಾಣದಲ್ಲಿ ನಿಂತವರಿಗೆ ಬಸ್ ಡಿಕ್ಕಿ, ಒಬ್ಬ ಸಾವು
ಮಂಗಳೂರು, ಆ.28 : ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ ಹೊಡೆದಿದ್ದರಿಂದ ಒಬ್ಬ ಯುವಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಕಂಕನಾಡಿಯ ಬೆಂದೂರ್ ವೆಲ್ ಸರ್ಕಲ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ ಯುವಕನನ್ನು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ತಿಲಕ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರು ತಿಲಕ್ ಗೆಳೆಯನಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಬೆಳಗ್ಗೆ ತಿಲಕ್ ನಿಲ್ದಾಣದಲ್ಲಿ ಬಸ್ ಕಾಯುತ್ತಾ ನಿಂತಿದ್ದಾಗ, ಸ್ಟೇಟ್ ಬ್ಯಾಂಕ್ನಿಂದ ಕೊಣಜೆ ಕಡೆಗೆ ಹೋಗುತ್ತಿದ್ದ 51ನೇ ನಂಬರಿನ ಬಸ್ ನಿಯಂತ್ರಣ ತಪ್ಪಿ ತಿಲಕ್ ಮತ್ತು ಬಸ್ ಕಾಯುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದೆ. [ಮಂಗಳೂರಿನಲ್ಲಿ ಹಜ್ ಯಾತ್ರೆಗೆ ಬೇಗ್ ಚಾಲನೆ]
ಅಪಘಾತದಿಂದಾಗಿ ತಿಲಕ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಆತನ ಸ್ನೇಹಿತ ಮತ್ತು ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಾಂಸದಂಗಡಿಗಳ ಸಮೀಕ್ಷೆಗೆ ಸೂಚನೆ : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳು ಒಂದು ತಿಂಗಳವೊಳಗೆ ತಮ್ಮ ವ್ಯಾಪ್ತಿಯಲ್ಲಿರುವ ಕೋಳಿ, ಮಾಂಸದಂಗಡಿ, ಇತರ ಮಾಂಸದಂಗಡಿಗಳ ಕುರಿತು ಸಮೀಕ್ಷೆ ನಡೆಸಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ನಿರ್ದೇಶನ ನೀಡಿದ್ದಾರೆ.
ಮಾಂಸದಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಜಲಮೂಲಗಳು ಕಲುಷಿತವಾಗದಂತೆ ಸಮರ್ಪಕವಾಗಿ ವಿಲೆವಾರಿ ಮಾಡಲು ಎಲ್ಲ ಮಾಂಸದ ಅಂಗಡಿಗಳಿಗೆ ನೋಟೀಸ್ ನೀಡುವಂತೆ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಮುನಿಸಿಪಲ್ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.












Click it and Unblock the Notifications