'ನಳೀನ್ ಕುಮಾರ್ ಕಟೀಲ್ ನಂ.1 ಸಂಸದರಲ್ಲ'
ಮಂಗಳೂರು, ಜೂ 24 : 'ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನಂಬರ್ ಒನ್ ಸಂಸದರೆಂದು ಕಟೌಟ್ ಹಾಕಿ ಪ್ರಚಾರ ಪಡೆಯುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ' ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ದೂರಿದ್ದಾರೆ. ನಳೀನ್ ಕುಮಾರ್ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, 'ನಂಬರ್ 1 ಸಂಸದನಾಗಲು ಮಾನದಂಡ ಏನು? ಸಂಸದರ ನಿಧಿಯನ್ನೇ ವಿನಿಯೋಗಿಸಿದ ಆಧಾರದಲ್ಲಿ ನಂಬರ್ ಒನ್ ಆಗುವುದಾದರೆ ಉಳಿದ ಸಂಸದರ ಪರಿಸ್ಥಿತಿ ಏನು?' ಎಂದು ಪ್ರಶ್ನಿಸಿದರು.'
'ನಳೀನ್ ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟಿರುವಾಗ ಸಂಸದರು ಪುಕ್ಕಟೆ ಪ್ರಚಾರದ ಗಿಮಿಕ್ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ ನಳಿನ್ ಅವರ ಕೊಡುಗೆಯೇನು? ಬಿ.ಸಿ. ರೋಡ್ ಸರ್ವಿಸ್ ರಸ್ತೆಗೆ 26 ಕೋಟಿ ರೂ. ಹಿಂದೆ ಮಂಜೂರಾಗಿದೆ. ಆದರೆ ಇನ್ನೂ ಕೆಲಸ ಆರಂಭವಾಗಿಲ್ಲ' ಎಂದರು.

ಇದು ಮಾಡಬೇಕಾಗಿರುವುದು ಲೋಕಸಭಾ ಸದಸ್ಯರ ಕೆಲಸವಲ್ಲವೇ? ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಯಲ್ಲಿ ತನ್ನ ಪಾತ್ರ ಏನೂ ಇಲ್ಲದಿದ್ದರೂ ಸಂಸದರು ಹೋಗಿ ಪರಿಶೀಲಿಸಿ, ತಾನೇ ಮಾಡಿದ್ದು ಎಂಬಂತೆ ಪ್ರಚಾರ ಪಡೆಯುತ್ತಿದ್ದಾರೆ. ಮಂಗಳೂರಿಗೆ ರೈಲ್ವೆ ಜಂಕ್ಷನ್ ತಂದದ್ದು ಯಾರು ಎಂದು ಪ್ರಶ್ನಿಸಿದರು. ಇವರು ನಂಬರ್ ಒನ್ ಸಂಸದರಲ್ಲವೇ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಐಟಿ ಬೇಕು, ಸ್ಮಾರ್ಟ್ ಸಿಟಿ ಬೇಕು, ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ಬೇಕು, ಸುಸಜ್ಜಿತ ಪಾಸ್ ಪೋರ್ಟ್ ಕಚೇರಿ ಬೇಕು, ಕೇಂದ್ರೀಯ ವಿಶ್ವವಿದ್ಯಾನಿಲಯ ಬೇಕು. ಈ ಬೇಡಿಕೆಗಳನ್ನು ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ತರಲಿ. ಇವರ ಜೊತೆಗೆ ನಂಬರ್ ಇಲ್ಲದ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಕೂಡಾ ಕೈ ಜೋಡಿಸಲಿ ಎಂದರು.
ಹಗರಣ ಮುಕ್ತ ಸರ್ಕಾರ ಎಂದು ಬೀಗುತ್ತಿರುವ ಕೇಂದ್ರ ಸರ್ಕಾರ ಲಲಿತ್ ಗೇಟ್ ಪ್ರಕರಣ ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಮಂಗಳೂರು ಪಾಲಿಕೆ ಆಯುಕ್ತರನ್ನು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗುರಿ ಮಾಡಿಲ್ಲ. ಉತ್ತಮ ಅಧಿಕಾರಿ ಬೇಕೆಂಬುದೇ ತಮ್ಮ ಬೇಡಿಕೆ. ಬರೀ ದಕ್ಷ ಅಧಿಕಾರಿಯಾಗಿದ್ದರೆ ಸಾಲದು. ಕೆಲಸವೂ ಆಗಬೇಕು ಎಂದು ಪರೋಕ್ಷವಾಗಿ ಆಯುಕ್ತೆಯಾಗಿದ್ದ ಹೆಫ್ಸಿಬಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications