ಹಿರಿಯ ಸಾಹಿತಿ ಡಾ. ಸಾರಾ ಅಬೂಬಕ್ಕರ್ ಗೆ ಲಷ್ಕರಿ ಪ್ರಶಸ್ತಿ
ಮಂಗಳೂರು, ಆಗಸ್ಟ್ 30 : ಪುತ್ತೂರಿನ ಲೋಕ ವಿಕಾಸ ಪ್ರತಿಷ್ಠಾನ ಹಾಗೂ ಲಷ್ಕರಿ ಕೇಶವ ಭಟ್ ಟ್ರಸ್ಟ್ ಪ್ರತಿವರ್ಷ ನೀಡುವ ಲಷ್ಕರಿ ಪ್ರಶಸ್ತಿಗೆ ಈ ಬಾರಿ ಹಿರಿಯ ಸಾಹಿತಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಮುಕ್ತ ವ್ಯಾಪ್ತಿಯನ್ನು ಹೊಂದಿರುವ ಈ ಪ್ರಶಸ್ತಿಗೆ ವಿಶಿಷ್ಟ ಸಾಧಕರನ್ನು ಪ್ರತಿ ವರ್ಷ ಆಯ್ಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅದರಲ್ಲೂ ಮಹಿಳಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಸಾರಾ ಅಬೂಬಕ್ಕರ್ ಅವರನ್ನು 2017ನೇ ಸಾಲಿನ ಲಷ್ಕರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 3ರಂದು ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಸಂದರ್ಭದಲ್ಲಿ ಲೋಕ ವಿಕಾಸ್ ಪ್ರತಿಷ್ಠಾನದ ಅಧ್ಯಕ್ಷ ಎಸ್ .ಜಿ ಕೃಷ್ಣರವರು ರಚಿಸಿದ ಸಮಾನ ನಾಗರಿಕ ಸಂಹಿತೆ ಒಂದು ವಿವೇಚನೆ ಎಂಬ ಕೃತಿ ಕೂಡ ಅನಾವರಣಗೊಳ್ಳಲಿದೆ .
ಕಾರ್ಯಕ್ರಮದ ಅಂಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ,ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆ ನೆರವು ಸೇರಿದಂತೆ ವಿದ್ಯಾಸಂಸ್ಥೆಗಳಿಗೆ ಪ್ರತಿಷ್ಠಾನದ ವತಿಯಿಂದ ಕೊಡುಗೆಗಳ ವಿತರಣೆ ನಡೆಯಲಿದೆ.