ಮಂಗಳೂರು: ತಲಾಖ್ ವಿಷಯದಲ್ಲಿ ಯಾರು ಹಸ್ತಕ್ಷೇಪ ಮಾಡಬಾರದು
ಮಂಗಳೂರು, ಅಕ್ಟೋಬರ್. 29 : ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿ ಮತ್ತು ಶರೀಯತ್ ನಿಯಮಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಖಂಡಿಸಿ ಮುಸ್ಲಿಂ ಸಂಘನೆಗಳಾದ ಎಸ್ಜೆಯು, ಎಸ್ಜೆಎಂ, ಎಸ್ವೈಎಸ್, ಎಸ್ಇಡಿಸಿ, ಕೆಎಂಜೆಸಿ, ಕೆಸಿಎಫ್ ಎಸೆಸೆಫ್, ಎಸ್ಎಂಎ ಸಂಘಟನೆಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಈ ವೇಳೆ ಉಡುಪಿ ಸಂಯುಕ್ತದ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಮಾತನಾಡಿ ಮುಸ್ಲಿಂ ಸಮುದಾಯದ ಬಗ್ಗೆ ಕೀಳರಿಮೆ ಬೇಡ, ಭಿನ್ನಾಬಿಪ್ರಾಯದಿಂದ ಹಂಚಿಹೋಗಿದ್ದರೂ ನಮ್ಮಲ್ಲಿ ಐಕೈತೆ ಇನ್ನೂ ಬಲಿಷ್ಟವಾಗಿದೆ. ಶರೀಯತ್ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದು ತಪ್ಪು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇಸ್ಲಾಂ ಪರಿಪೂರ್ಣ ಧರ್ಮವಾಗಿರುವುದರಿಂದ ರದ್ದತಿ, ಸೇರ್ಪಡೆಗೆ ಅವಕಾಶಗಳಿಲ್ಲ. ತಲಾಖ್ ಎಂಬುದು ದೇವನಿಗೂ ಅನಿಷ್ಟವಾದದ್ದು, ಮನಸ್ಸಿಗೆ ಬಂದಂತೆ ತಲಾಖ್ ನೀಡಲು ಯಾರಿಗೂ ಅವಕಾಶಗಳಿಲ್ಲ.
ಪತಿ-ಪತ್ನಿ ದಾಂಪತ್ಯ ಜೀವನ ಮುಂದೆ ಸರಿ ಹೊಂದುವುದಿಲ್ಲ ಎಂದು ಖಾತರಿ ಪಡಿಸಿದಾಗ ಮಾತ್ರ ತಲಾಖ್ ಅನಿವಾರ್ಯವಾಗುವುದು. ಇಸ್ಲಾಂ ಧರ್ಮದಲ್ಲಿ ಹೆಣ್ಣಿನ ಪರವಾಗಿ ಹಲವಾರು ನಿಯಮಗಳಿವೆ. ಒಂದೇ ಬಾರಿ ಮೂರು ತಲಾಖ್ ಹೇಳುವಂತಿಲ್ಲ.

ಮೊದಲ ಬಾರಿ ತಲಾಖ್ ನೀಡುವಾಗ ಹೆಣ್ಣಿಗೆ ಸರಿ ಹೊಂದಲು ಕಾಲಾವಕಾಶ ನೀಡಬೇಕು. ಎರಡನನೇ ಬಾರಿ ತಲಾಖ್ ಹೇಳುವಾಗಲೂ ಸಮಾವಕಾಶ ನೀಡಬೇಕು ಹಾಗೆಯೇ ಮೂರನೇ ಬಾರಿ ಪತಿ ಮತ್ತು ಪತ್ನಿಯ ಕಡೆಯಿಂದ ಒಬ್ಬೊಬ್ಬರನ್ನು ಮಧ್ಯಸ್ತರಾಗಿ ಇರಿಸಿ ಮಾತುಕತೆ ನಡೆಸಬೇಕು.
ಒಂದು ವೇಳೆ ಇಬ್ಬರೂ ಸಮ್ಮತಿ ನೀಡದೇ ಹೋದರೆ ಮೂರನೇ ತಲಾಖ್ ಅನಿವಾರ್ಯವಾಗತ್ತದೆ. ಇಸ್ಲಾಂ ಧರ್ಮವನ್ನು ಮೀರಿ ಸರಕಾರ ಹಸ್ತಕ್ಷೇಪ ಮಾಡಿದರೆ ಕೋಟ್ಯಂತರ ಮುಸ್ಲಿಂ ಬಾಂಧವರ ಭಾವನೆಗಳಿಗೆ ಧಕ್ಕೆ ಬಂದಲ್ಲಿ ಸಂಪೂರ್ಣ ಮುಸ್ಲಿಂ ಸಮುದಾಯ ಒಂದಾಗಲಿದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications