ನಿಷೇಧಿತ ಪಿಎಫ್ಐಗೆ ಫಂಡಿಂಗ್: ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆಗಳಲ್ಲಿ NIA ದಾಳಿ
ಮಂಗಳೂರು, ಆಗಸ್ಟ್, 14: ನಿಷೇಧಿತ ಪಿಎಫ್ಐ ಸಂಘಟನೆಗೆ ವಿದೇಶದಿಂದ ಫಂಡಿಗ್ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಮೆಲ್ಕಾರ್ನಲ್ಲಿ ಎನ್ಐಎ ದಾಳಿ ನಡೆದಿದೆ. ಇಲ್ಲಿನ ಇಬ್ರಾಹಿಂ ಎಂಬವವರ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳ ರಾಜ್ಯದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಇಬ್ರಾಹಿಂ ಪಿಎಫ್ಐ ನಿಷೆಧದ ಬಳಿಕ ಭೂಗತನಾಗಿದ್ದ. ಇದೀಗ ಇಬ್ರಾಹಿಂ ಮನೆಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ದಾಳಿ ವೇಳೆ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಈ ಹಿಂದೆ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಅನ್ನು ಎನ್ಐಎ ಭೇದಿಸಿತ್ತು. ಈ ವೇಳೆ ಬಂಧಿತರ ವಿಚಾರಣೆ ಸಂದರ್ಭ ಇಬ್ರಾಹಿಂ ಹೆಸರು ಪ್ರಸ್ತಾಪಗೊಂಡಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್ಗೆ ಇಬ್ರಾಹಿಂ ಲಿಂಕ್ ಇದೆ ಎಂಬುದು ತಿಳಿದುಬಂದಿದೆ.
ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಅನ್ನು ಬೇಧಿಸಿರುವ ಎನ್ಐಎ ಅಧಿಕಾರಿಗಳು ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಮತ್ತು ಬಂಟ್ವಾಳದ ಮಲ್ಕಾರ್ ಎಂಬಲ್ಲಿಯೂ ದಾಳಿ ನಡೆಸಿದ್ದಾರೆ. ವಳಚ್ಚಿಲ್ನಲ್ಲಿ ಮುಸ್ತಾಕ್ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಸೇರಿದಂತೆ ಎನ್ಐಎ ಅಧಿಕಾರಿಗಳು 5 ರಾಜ್ಯಗಳ 14 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಕರ್ನಾಟಕ , ಮಹಾರಾಷ್ಟ್ರ , ಕೇರಳ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯದಲ್ಲಿ ಏಕಕಾಲದಲ್ಲಿ ಎನ್ಐಎ ದಾಳಿ ನಡೆಸಿದೆ. ಇದರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೇರಳದ ಕಣ್ಣೂರು, ಮಲ್ಲಪ್ಪುರಂ, ಮಹಾರಾಷ್ಟ್ರದ ನಾಸಿಕ್, ಕೊಲ್ಲಾಪುರ ಹಾಗೂ ಮುರ್ಷಿದಾಬಾದ್, ಕತಿಹಾರ್ಗಳಲ್ಲಿ ದಾಳಿ ನಡೆಸಿದೆ.
ಪಿಎಫ್ಐ ಸಂಘಟನೆಗಳ ಉಗ್ರಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಯಲ್ಲಿ ಭಾಗಿ ಶಂಕೆ ಹಿನ್ನೆಲೆ ಈ ದಾಳಿ ನಡೆದಿದೆ. 2047ರ ಇಸವಿಯೊಳಗೆ ಭಾರತದಲ್ಲಿ ಪಿಎಫ್ಐ ಆರ್ಮಿ ಸ್ಥಾಪಿಸಲು ಮುಂದಾಗಿದ್ದ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಯುವಕರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಈ ಶಸ್ತ್ರಾಸ್ತ್ರ ತರಬೇತಿಯಲ್ಲಿ ಐರನ್ ರಾಡ್ಸ್ , ಕತ್ತಿಗಳ ತರಬೇತಿ ಕೂಡ ನಡೆಸಿರುವ ಬಗ್ಗೆ ಎನ್ಐಎ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಈ ಮಾಹಿತಿಯನ್ನು ಆಧಾರಿಸಿ ಎನ್ಐಎ ಕೆಲವು ಪಿಎಫ್ಐ ಏಜೆಂಟರನ್ನು ಬಂಧಿಸಿದೆ. ಎನ್ಐಎ ಈ ಹಿಂದೆ ಪಿಎಫ್ಐಯ 19 ಮಂದಿಯ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ ಮಾಡಿತ್ತು.












Click it and Unblock the Notifications